ಬೆಂಗಳೂರು ಗಲಭೆ ಬೆನ್ನಲ್ಲೇ ಎಚ್ಚೆತ್ತ ತೆಲಂಗಾಣ ಪೊಲೀಸರು: ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ
ಹೈದರಾಬಾದ್, ಆಗಸ್ಟ್ 13: ಬೆಂಗಳೂರಿನಲ್ಲಿ ಫೇಸ್ಬುಕ್ ಪೋಸ್ಟ್ ಒಂದರ ಕಾರಣದಿಂದ ನಡೆದ ಹಿಂಸಾಚಾರದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಹೈದರಾಬಾದ್ ಪೊಲೀಸರು, ತೆಲಂಗಾಣದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.
Recommended Video
ಸಾಮಾಜಿಕ ಜಾಲತಾಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವಂತೆ ಮತ್ತು ಯಾವುದೇ ರೀತಿಯ ಅವಹೇಳನಾಕಾರಿ ಪೋಸ್ಟ್ಗಳು ಕಂಡುಬಂದರೆ ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ನ ಸಾಮಾಜಿಕ ಜಾಲತಾಣ ಘಟಕಕ್ಕೆ ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಸೂಚನೆ ನೀಡಿದ್ದಾರೆ.
ದೊಂಬಿ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ: ಸಚಿವ ಸದಾನಂದ ಗೌಡ
ಬೆಂಗಳೂರಿನಲ್ಲಿ ಸಂಭವಿಸಿದ ಹಿಂಸಾಚಾರ ಘಟನೆಯ ಹಿನ್ನೆಲೆಯಲ್ಲಿ ಅಂಜನಿ ಕುಮಾರ್ ಅವರು, ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು.
'ಯಾವುದೇ ರೀತಿಯ ಉದ್ವಿಗ್ನ ಪರಿಸ್ಥಿತಿ ಉಂಟಾಗುವ ಸೂಚನೆ ಇದ್ದರೆ ಹತ್ತು ನಿಮಿಷದಲ್ಲಿಯೇ ಸ್ಥಳಕ್ಕೆ ಧಾವಿಸಬೇಕು. ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳೂ ಕೂಡಲೇ ಸ್ಥಳಕ್ಕೆ ತೆರಳಿ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಮೂಲಕ ಶಾಂತಿ ಮೂಡಿಸಬೇಕು' ಎಂದು ಅವರು ನಿರ್ದೇಶಿಸಿದರು.
ಬೆಂಗಳೂರಿನಲ್ಲಿ ನಡೆದ ಗಲಭೆಗೆ ಫೇಸ್ಬುಕ್ ಪೋಸ್ಟ್ ಮಾತ್ರ ಕಾರಣವಾ?
ಸೈಬರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಮತ್ತು ದ್ವೇಷ ಮೂಡಿಸುವ ಸಂಗತಿಗಳನ್ನು ಹಂಚಿಕೊಳ್ಳುವುದರ ವಿರುದ್ಧ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
'ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಅವಹೇಳನಾಕಾರಿ ಪೋಸ್ಟ್ ಒಂದು ಜೀವ ಮತ್ತು ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿರುವುದು ನಿಮ್ಮ ಗಮನದಲ್ಲಿರಲಿ. ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾಮಾಜಿಕ ಶಾಂತಿಯನ್ನು ಕದಡುವಂತಹ ಯಾವುದೇ ರೀತಿಯ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ' ಎಂದು ಸೂಚಿಸಿದ್ದಾರೆ.