ನಟ ರಜನಿಕಾಂತ್ಗೆ ಅನಾರೋಗ್ಯ: ಹೈದರಾಬಾದ್ ಆಸ್ಪತ್ರೆಗೆ ದಾಖಲು
ಹೈದರಾಬಾದ್, ಡಿಸೆಂಬರ್ 25: ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಶುಕ್ರವಾರ ಬೆಳಿಗ್ಗೆ ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ರಕ್ತದೊತ್ತಡದಲ್ಲಿ ಏರಿಳಿದ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದಷ್ಟೇ ರಜನಿಕಾಂತ್ ನಟನೆಯ 'ಅಣ್ಣಾತೆ' ಚಿತ್ರದ ಶೂಟಿಂಗ್ ಸೆಟ್ನಲ್ಲಿ ಎಂಟು ಮಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ವರದಿಯಾಗಿತ್ತು.
ರಜನಿಕಾಂತ್ ಅವರಲ್ಲಿ ವೈರಸ್ ನೆಗೆಟಿವ್ ಬಂದಿದ್ದರೂ ಅವರ ರಕ್ತದೊತ್ತಡ ಮತ್ತು ಬಳಲಿಕೆ ಉಂಟಾದ ಕಾರಣ ಹೈದರಾಬಾದ್ನ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರ ತಂಡವು ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ.
'ರಜನಿಕಾಂತ್ ಅವರನ್ನು ಇಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಕಳೆದ ಹತ್ತು ದಿನಗಳಿಂದ ಸಿನಿಮಾ ಚಿತ್ರೀಕರಣಕ್ಕಾಗಿ ಹೈದರಾಬಾದ್ನಲ್ಲಿದ್ದಾರೆ. ಸೆಟ್ನಲ್ಲಿದ್ದ ಕೆಲವು ಮಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ರಜನಿಕಾಂತ್ ಅವರನ್ನು ತಪಾಸಣೆಗೆ ಒಳಗಾಗಿದ್ದು ಡಿ. 22ರಂದು ಅವರ ವರದಿ ನೆಗೆಟಿವ್ ಬಂದಿದೆ. ಅಂದಿನಿಂದ ಅವರು ಸ್ವಯಂ ಪ್ರತ್ಯೇಕವಾಗಿದ್ದು, ಅವರನ್ನು ತೀವ್ರವಾಗಿ ನಿಗಾದಲ್ಲಿ ಇರಿಸಲಾಗಿತ್ತು' ಎಂದು ಆಸ್ಪತ್ರೆ ಹೇಳಿಕೆ ತಿಳಿಸಿದೆ.
'ರಜನಿಕಾಂತ್ ಅವರಲ್ಲಿ ಕೋವಿಡ್ 19ರ ಯಾವುದೇ ಲಕ್ಷಣಗಳಿಲ್ಲದೆ ಹೋದರೂ ಅವರ ರಕ್ತದೊತ್ತಡದಲ್ಲಿ ತೀವ್ರ ಏರಿಳಿತಗಳುಂಟಾಗಿದೆ. ಅವರ ಆರೋಗ್ಯವನ್ನು ಹೆಚ್ಚು ತಪಾಸಣೆಗೆ ಒಳಪಡಿಸಬೇಕಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ರಕ್ತದೊತ್ತಡ ಸ್ಥಿರ ಸ್ಥಿತಿಗೆ ಬಂದು ಬಿಡುಗಡೆಯಾಗುವವರೆಗೂ ಅವರ ಆರೋಗ್ಯವನ್ನು ಸತತವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ. ರಕ್ತದೊತ್ತಡ ಏರಿಳಿತ ಮತ್ತು ಆಯಾಸದ ಹೊರತಾಗಿ ಅವರಲ್ಲಿ ಬೇರೆ ಯಾವುದೇ ಲಕ್ಷಣ ಕಂಡುಬಂದಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ' ಎಂದು ಮಾಹಿತಿ ನೀಡಿದೆ.