ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಕೆಂಡ ಕಾರಿದ ನಟ ಪ್ರಕಾಶ್ ರಾಜ್
ಹೈದರಾಬಾದ್, ಜನವರಿ 23: ""ಕೇಂದ್ರ ಸರ್ಕಾರ ದಾಖಲೆಗಳನ್ನು ತಯಾರಿಸುವುದಾದರೆ, ಈ ದೇಶದ ನಿರುದ್ಯೋಗಿ ಯುವಕರ, ಬಡವರ ಹಾಗೂ ಅನಕ್ಷರಸ್ಥರ ಬಗ್ಗೆ ದಾಖಲೆಗಳನ್ನು ತಯಾರಿಸಿ ಜನರ ಮುಂದೆ ಇಡಲಿ. ಪೌರತ್ವ ನೋಂದಣಿ, ಪೌರತ್ವ ಕಾಯ್ದೆ, ಪೌರತ್ವ ತಿದ್ದುಪಡಿ ಎಂಬ ನಾಟಕಗಳು ಬೇಡ'' ಎಂದು ಖ್ಯಾತ ನಟ ಪ್ರಕಾಶ್ ರಾಜ್ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಗುರುವಾರ ಹೈದರಾಬಾದ್ನಲ್ಲಿ ಸಿಎಎ, ಎನ್ಆರ್ಸಿ ಹಾಗೂ ಎನ್ಆರ್ಪಿ ವಿರೋಧಿಸಿ ನಡೆದ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ""ಸರ್ಕಾರ ದಾಖಲೆಗಳನ್ನು ತಯಾರಿಸಲೇಬೇಕಾದರೆ, ದೇಶದ ಅಭಿವೃದ್ಧಿ ಬಗ್ಗೆ ದಾಖಲೆಗಳನ್ನು ತಯಾರಿಸಲಿ. ನಮಗೆ 3 ಸಾವಿರ ಕೋಟಿ ರುಪಾಯಿ ಬೆಲೆ ಬಾಳುವ ಪ್ರತಿಮೆಗಳು ಬೇಕಾಗಿಲ್ಲ. ಬೇಕಿರುವುದು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ'' ಎಂದು ಹೇಳಿದ್ದಾರೆ.
ಮೋದಿ ನಿಮ್ಮ ಡಿಗ್ರಿ ಸರ್ಟಿಫಿಕೇಟ್ ಮೊದಲು ತೋರ್ಸಿ: ಪ್ರಕಾಶ್ ರಾಜ್
""ಸರ್ಕಾರ ಪ್ರತಿಭಟನಾಕಾರರನ್ನು ಹಿಂಸೆಗೆ ಪ್ರಚೋದಿಸುವಂತೆ ಮಾಡುತ್ತಿದೆ. ಆದರೆ, ದೇಶದ ತುಂಬ ಪ್ರತಿಭಟನಕಾರರು ತಾಳ್ಮೆಯಿಂದ ಹಾಗೂ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ. ಈ ದೇಶ ಎಲ್ಲರಿಗೂ ಸೇರಿದ್ದು. "ಮುಸ್ಲಿಮ್ ಎಂಬ ಕಾರಣಕ್ಕೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಹೀರೋ ಹೆಸರೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಪಟ್ಟಿಯಲ್ಲಿ ಕಾಣೆ ಆಗಿದೆ. ಅಸ್ಸಾಂನಲ್ಲಿ 19 ಲಕ್ಷ ಮಂದಿಗೆ ಪೌರತ್ವ ನಿರಾಕರಿಸಲಾಗಿದೆ ಎಂದು ಪ್ರಕಾಶ್ ರಾಜ್ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.