ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನಕ್ಕೆ ಆಧಾರ್ ಕಾರ್ಡ್ ಕಡ್ಡಾಯ!
ಏಳು ಮಲೆ ಒಡೆಯ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಭಕ್ತಾದಿಗಳು ಗುರುತಿನ ಚೀಟಿ ಹಿಡಿದು ಕ್ಯೂನಲ್ಲಿ ನಿಲ್ಲಬೇಕಾಗಿದೆ.
ಹೈದರಾಬಾದ್, ಡಿಸೆಂಬರ್ 22: ಏಳು ಮಲೆ ಒಡೆಯ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಭಕ್ತಾದಿಗಳು ಗುರುತಿನ ಚೀಟಿ ಹಿಡಿದು ಕ್ಯೂನಲ್ಲಿ ನಿಲ್ಲಬೇಕಾಗಿದೆ. ಆಧಾರ್ ಕಾರ್ಡ್ ಅಥವಾ ಇನ್ಯಾವುದೇ ಗುರುತಿನ ಚೀಟಿ ಹೊಂದಿರುವುದನ್ನು ಟಿಟಿಡಿ ಕಡ್ಡಾಯಗೊಳಿಸಿದೆ.
ಈ ಮುಂಚೆ ಕೆಲವು ಪೂಜೆಗಳಿಗೆ ಮಾತ್ರ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲಾಗಿತ್ತು. ಈಗ ಟಿಟಿಡಿ ನೀಡುವ ಎಲ್ಲಾ ಸೇವೆಗಳಲ್ಲಿ ಪಾರದರ್ಶಕತೆ ತರಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. [ತಿರುಮಲದ ಕರ್ನಾಟಕ ಭವನ, ಗೋವಿಂದಾ ಕಾಪಾಡು!]
ಆಧಾರ್ ಕಾರ್ಡ್ ಇಲ್ಲದಿದ್ರೂ ದೇಗುಲ ಪ್ರವೇಶಿಸಲು ಅವಕಾಶವಿದೆ. ಆದರೆ ಆಧಾರ ಕಾರ್ಡ್ ಅಥವಾ ಯಾವುದೇ ರೀತಿಯ ಗುರುತಿನ ಚೀಟಿ ತೋರಿಸದಿದ್ರೆ ದೇವರ ವಿಶೇಷ ದರ್ಶನ, ಉಚಿತ ಲಡ್ಡು ಸೇರಿದಂತೆ ಹಲವು ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಟಿಟಿಡಿಯ ಕಾರ್ಯನಿರ್ವಹಕ ಅಧಿಕಾರಿ ಡಿ ಸಾಂಬಶಿವ ರಾವ್ ಹೇಳಿದ್ದಾರೆ.
ಬೆಟ್ಟ ಹತ್ತಿ ಬಂದು ಭಗವಂತನ ದರ್ಶನ ಪಡೆಯುವ ಭಕ್ತಾದಿಗಳಿಗೆ ಒಂದು ಉಚಿತ ಲಡ್ಡು ಹಾಗೂ ಹೆಚ್ಚುವರಿ ಲಡ್ಡುಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ.