ಹೈದರಾಬಾದ್: 127 ಮಂದಿಗೆ ಆಧಾರ್ ಇಲಾಖೆಯಿಂದ ನೊಟೀಸ್
ಹೈದರಾಬಾದ್ , ಫೆಬ್ರವರಿ 19: ಆಟೋ ಡ್ರೈವರ್ ಸೇರಿ 127 ಮಂದಿಗೆ ಆಧಾರ್ ಇಲಾಖೆ ನೊಟೀಸ್ ಜಾರಿ ಮಾಡಿದೆ. ತಮ್ಮ ನಾಗರೀಕತೆ ಸಾಬೀತು ಪಡಿಸಲೆಂದು ಈ ನೋಟಿಸ್ ನೀಡಲಾಗಿದೆ ಎನ್ನಲಾಗಿತ್ತು, ಆದರೆ ಈ ಬಗ್ಗೆ ಆಧಾರ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಸುಳ್ಳು ಪ್ರಮಾಣ ಪತ್ರ ನೀಡಿ ಆಧಾರ್ ಮಾಡಿಸಿಕೊಂಡಿದ್ದ ಕಾರಣ 127 ಮಂದಿ ಗೆ ನೊಟೀಸ್ ನೀಡಲಾಗಿದೆಯೇ ಹೊರತು, ನೊಟೀಸ್ ಗೂ ಪೌರತ್ವಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆಧಾರ್ ಹೇಳಿದೆ.
ಯುಐಡಿಎಐ ಈ ಬಗ್ಗೆ ಟ್ವೀಟ್ ಸಹ ಮಾಡಿದ್ದು, 'ನಕಲಿ ಪ್ರಮಾಣ ಪತ್ರಗಳು, ಫೋರ್ಜರಿ ಬಯೋಮೆಟ್ರಿಕ್ ಗಳನ್ನು ನೀಡಿ ಆಧಾರ್ ಮಾಡಿಸಿಕೊಂಡಿದ್ದರಿಂದ ನೊಟೀಸ್ಗಳನ್ನು ನೀಡಲಾಗಿದೆ, ನೋಟಿಸ್ ಗೂ ಪೌರತ್ವಕ್ಕೂ ಸಂಬಂಧವಿಲ್ಲ' ಎಂದು ಹೇಳಿದೆ.
ನೋಟಿಸ್ ನೀಡಿದವರ ಆಧಾರ್ ಸಂಖ್ಯೆಗಳನ್ನು ತಕ್ಷಣಕ್ಕೆ ರದ್ದು ಮಾಡಲಾಗಿದೆ. ನೋಟಿಸ್ ಪಡೆದವರಿಗೆ ಫೆಬ್ರವರಿ 20 ರಂದು ಉಪ ನಿರ್ದೇಶಕರ ಮುಂದೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಹೇಳಿದ್ದು, ವಿಚಾರಣೆ ನಂತರ ಪ್ರಕರಣದ ಬಗ್ಗೆ ಪೂರ್ಣ ಮಾಹಿತಿ ಹೊರಬೀಳಲಿದೆ' ಎಂದಿದ್ದಾರೆ.
ಆಧಾರ್ ಕಾರ್ಡ್ ಪೌರತ್ವ ಸಾಬೀತುಪಡಿಸುವ, ನಿವಾಸ ಧೃಡೀಕರಣ ಪತ್ರವಲ್ಲ. ಆಧಾರ್ ಅನ್ನು ಪೌರತ್ವ ಸಾಬೀತಿಗೆ ದಾಖಲೆಯಾಗಿ ಬಳಸುವಂತೆಯೂ ಇಲ್ಲ ಎಂದು ಆಧಾರ್ ಸ್ಪಷ್ಟನೆ ನೀಡಿದೆ.