ಮಹಿಳಾ ತಹಶೀಲ್ದಾರ್ ಗೆ ಕಚೇರಿಯಲ್ಲೇ ಬೆಂಕಿ, ಸ್ಥಳದಲ್ಲೇ ಸಾವು
ಅಬ್ದುಲ್ಲಾಪುರ, ನವೆಂಬರ್ 04: ತೆಲಂಗಾಣದ ರಂಗಾರೆಡ್ಡಿಜಿಲ್ಲೆ ಅಬ್ದುಲ್ಲಾಪುರ ಎಂಬಲ್ಲಿ ಮಹಿಳಾ ತಹಶೀಲ್ದಾರ್ ವಿಜಯಾ ರೆಡ್ಡಿ ಎಂಬುವವರನ್ನು ಅವರ ಕಚೇರಿ ಎದುರಲ್ಲೇ ಜೀವಂತವಾಗಿ ಬೆಂಕಿಹಚ್ಚಿ ಕೊಂದ ಘಟನೆ ನಡೆದಿದೆ.
ಅಧಿಕಾರಿ ವಿಜಯಾ ರೆಡ್ಡಿ ಅವರು ಇಂದು(ಸೋಮವಾರ) ಮಧ್ಯಾಹ್ನ ಭೋಜನ ವಿರಾಮದ ಸಮಯದಲ್ಲಿ ತಮ್ಮ ಚೇಂಬರ್ ನಲ್ಲಿ ಒಬ್ಬರೇ ಇದ್ದರು. ಈ ಸಮಯದಲ್ಲಿ ಅವರನ್ನು ಭೇಟಿಯಾಗಲು ಬಂದಿದ್ದ ಕೆಲವರು ಹೊರಗೇ ನಿಂತಿದ್ದರು. ಈ ಸಂದರ್ಭದಲ್ಲಿ ಆಕೆಯ ಚೇಂಬರ್ ಗೆ ಆಗಮಿಸಿದ ಕೆಲವರು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಅವರ ಕಾರ್ಯದರ್ಶಿಯೊಬ್ಬರು ವಿಜಯಾ ಅವರನ್ನು ರಕ್ಷಿಸಲು ಮುಂದಾದರಾದರೂ ವಿಜಯಾ ಅವರು ಸಾವಿಗೀಡಾದರು. ಅವರನ್ನು ರಕ್ಷಿಸಲು ತೆರಳಿದ್ದ ವ್ಯಕ್ತಿಯೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುರೇಶ್ ಎಂಬ ರೈತನಿಂದ ಕೃತ್ಯ
ಹಯತ್ನಗರ್ ದ ಗೌರೆಲ್ಲಿ ಎಂಬಲ್ಲಿಯ ರೈತ ಸುರೇಶ್ ಎಂಬಾತನೇ ಈ ಕೃತ್ಯ ಎಸಗಿದ್ದು, ಇಂದು ಮಧ್ಯಾಹ್ನ 1:30 ರ ಸುಮಾರಿಗೆ ಈ ಘಟನೆ ನಡೆದಿದೆ.
ಹೈದರಾಬಾದ್ ಆಸ್ಪತ್ರೆಯಲ್ಲಿ ಬೆಂಕಿ, ಮಗು ಸಾವು, ಕಾರಣ ಬಹಿರಂಗ
ಘಟನೆಗೆ ಕಾರಣವೇನು?
ಈ ರೈತನ ಜಮೀನಿಗೆ ಸಂಬಂಧ ಪಟ್ಟ ಪ್ರಕರಣವೊಂದರ ವಿಚಾರಣೆ ಕೋರ್ಟಿನಲ್ಲಿ ನಡೆಯುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ವಿಜಯಾ ರೆಡ್ಡಿ ಬಳಿ ರೈತ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತನಾಡಿದ್ದಾನೆ. ಜಗಳ ಆಡಿದ್ದಾನೆ. ಈ ಜಗಳವೇ ಮುಂದುವರಿದು, ಕೋಪಗೊಂಡ ರೈತ ಆಕೆಯನ್ನು ಕೊಲೆ ಮಾಡಿದ್ದಾನೆ.
ಘಟನೆ ನಡೆದಿದ್ದು ಹೇಗೆ?
ಆಕೆಯ ಕಚೇರಿಯೊಳಗಿನಿಂದ ಬೋಲ್ಟ್ ಹಾಕಿಕೊಂಡು, ಮೊದಲೇ ಕೊಲೆ ಮಾಡಲು ಸಿದ್ಧವಾಗಿ ಬಂದಂತೆ ತನ್ನೊಂದಿಗೆ ತಂದಿದ್ದ ಪೆಟ್ರೋಲ್ ಅನ್ನು ಆಕೆಯ ಮೇಲೆ ಸುರಿದು, ಬೆಂಕಿ ಹಚ್ಚಿದ್ದಾನೆ. ಆಕೆ ಕಿರುಚಾಡಿದಾಗ, ಕೆಲವರು ಬಾಗಿಲು ಒಡೆದುಕೊಂಡು ಒಳಗೆ ಬಂದು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆಯನ್ನು ರಕ್ಷಿಸಲು ಬಂದ ಇಬ್ಬರೂ ಶೇ.60 ರಷ್ಟು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಿತ್ತೂರು ಬಳಿ ಕಾರಿಗೆ ಬೆಂಕಿ: ಬೆಂಗಳೂರಿನ ಐವರು ಸಜೀವ ದಹನ
ಬೆಂಕಿ ಹಚ್ಚಿ ಪೊಲೀಸ್ ಸ್ಟೇಷನ್ನಿಗೆ ತೆರಳಿದ್ದ!
ಬೆಂಕಿ ಹಚ್ಚಿದ್ದ ಆರೋಪಿ ಸುರೇಶ್, ತಾನೇ ಪೊಲೀಸ್ ಸ್ಟೇಷನ್ನಿಗೆ ತೆರಳಿ, ತನ್ನ ಜಮೀನನ್ನು ರಿಜಿಸ್ಟರ್ ಮಾಡಿಸಲು ವಿಳಂಬವಾದ ಕಾರಣ ಹೀಗೆ ಮಾಡಿದ್ದಾಗಿ ಹೇಳಿಕೊಂದಿದ್ದಾನೆ. ಆತನೂ ಸುಟ್ಟ ಗಾಯದಿಂದ ಬಳಲುತ್ತಿದ್ದರಿಂದ ಸದ್ಯಕ್ಕೆ ಆರೋಪಿಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.