ಗಂಗೆಯಲ್ಲಿ ಮುಳುಗೆದ್ದರೆ ಕ್ಯಾನ್ಸರ್ ಬಂದೀತು ಎಚ್ಚರಿಕೆ!
ಹೈದರಾಬಾದ್, ಜೂ. 25 : ಹಿಂದೂ ಧರ್ಮೀಯರಿಗೆ ಗಂಗಾ ನದಿಯೆಂದರೆ ಏನೋ ಪವಿತ್ರ ಭಾವನೆ. ಹರಿಯುತ್ತಿರಲಿ ಅಥವಾ ನಿಂತೇ ಇರಲಿ ಗಂಗೆಯಲ್ಲಿ ಮೂಗು ಮುಚ್ಚಿಕೊಂಡು ಮೂರು ಬಾರಿ ಮುಳುಗೇಳಿದರೆ ಮಾಡಿದ ಪಾಪವೆಲ್ಲ ಪರಿಹಾರವಾಗುತ್ತದೆಂಬ ಅಚಲ ನಂಬಿಕೆ. ಆದರೆ, ನಂತರ ಏನಾಗಬಹುದು ಎಂಬ ಅರಿವು ಭಕ್ತರಿಗೆ ಇದೆಯಾ?
ಚರಂಡಿ ನೀರಿಗಿಂತಲೂ ಕೊಳಕಾಗಿರುವ ಗಂಗಾ ನದಿಯ ನೀರು ಎಷ್ಟು ಕಲ್ಮಷವಾಗಿದೆಯೆಂದರೆ, ಅದರಲ್ಲಿ ಮುಳುಗೆದ್ದವರಿಗೆ ಕ್ಯಾನ್ಸರ್ ರೋಗ ತಂದೊಡ್ಡುವ ಸಾಧ್ಯತೆ ಇರುತ್ತದೆ ಎಂದು ಹೈದರಾಬಾದ್ನ ಪರಮಾಣು ಇಂಧನ ಇಲಾಖೆಯ ಸಂಸ್ಥೆ ನಡೆಸಿದ ಅಧ್ಯಯನದಿಂದ ಈ ಆಘಾತಕಾರಿ ಸಂಗತಿ ಹೊರಬಿದ್ದಿದೆ.
National Centre for Compositional Characterisation of Materials (NCCM) ಸಂಸ್ಥೆ ಕಂಡುಹಿಡಿದಿದ್ದೇನೆಂದರೆ, ಗಂಗಾ ನದಿಯ ನೀರಿನಲ್ಲಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಕ್ಯಾರ್ಸಿನೋಜೀನ್ಸ್ ಎಂಬ ಪದಾರ್ಥ ಇದೆ. 2013ರ ಕುಂಭಮೇಳದ ಸಂದರ್ಭದಲ್ಲಿಯೇ ನೀರಿನ ಮಾದರಿ ತರಿಸಿಕೊಂಡು ವಿಸ್ತೃತ ಪರೀಕ್ಷೆಯನ್ನು ಈ ಸಂಸ್ಥೆ ನಡೆಸಿತ್ತು. [ಗತವೈಭವ ಮರಳುವುದೆ?]
ಗಂಗೆಯಲ್ಲಿ ಸ್ನಾನ ಮಾಡುವುದಲ್ಲದೆ ಪೂಜೆಗೆ, ಸಂಧ್ಯಾವಂದನೆಗೆ, ಅಭಿಷೇಕಕ್ಕೆ, ತೀರ್ಥಕ್ಕೆ ಕೂಡ ಇದೇ ನೀರನ್ನು ಬಳಸಲಾಗುತ್ತಿದೆ. ಇದರಲ್ಲಿ ವಿಷಕಾರಕ ಕ್ರೋಮಿಯಂ ಪ್ರಮಾಣ ಅಗತ್ಯಕ್ಕಿಂತ 50 ಪಟ್ಟು ಜಾಸ್ತಿಯಿದೆ. ಇಷ್ಟು ಅಧಿಕ ಪ್ರಮಾಣದ ಕ್ರೋಮಿಯಂ ದೇಹದಲ್ಲಿ ಸೇರ್ಪಡೆಯಾದರೆ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ ಮತ್ತು ಕ್ಯಾನ್ಸರ್ ಬಂದರೂ ಬರಬಹುದು ಎಂದು ಎನ್ಸಿಸಿಎಂ ಮುಖ್ಯಸ್ಥ ಡಾ. ಸುನೀಲ್ ಕುಮಾರ್ ಜೈ ಅವರು ಅಭಿಪ್ರಾಯಪಟ್ಟಿದ್ದಾರೆ.
ಗಂಗೆಯನ್ನು 'ಪವಿತ್ರ'ಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರಕಾರ ಈಗಾಗಲೆ ಕಾರ್ಯತತ್ಪರವಾಗಿದ್ದು, ಗಂಗೆಯನ್ನು ಶುದ್ಧೀಕರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಾಕಿಕೊಂಡಿದೆ. ಇದರ ಶುದ್ಧೀಕರಣಕ್ಕಾಗಿಯೇ ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾನದಿ ಪುನಶ್ಚೇತನ ಖಾತೆ ಸಚಿವೆ ಉಮಾ ಭಾರತಿಯನ್ನು ನಿಯೋಜಿಸಲಾಗಿದೆ. [ಬೆಂಗಳೂರು ಸ್ತನ ಕ್ಯಾನ್ಸರ್ ರಾಜಧಾನಿ]