ವಾರಂಗಲ್ನ ಒಂಬತ್ತು ಕೊಲೆ: ಬಯಲಾಯಿತು ಕರಾಳ ರಾತ್ರಿಯ ರೋಚಕ ಸತ್ಯ!
ವಾರಂಗಲ್, ಮೇ 26: ದೇಶವನ್ನು ಬೆಚ್ಚಿ ಬೀಳಿಸಿದ್ದ, ತೆಲಂಗಾಣದ ವಾರಂಗಲ್ ಬಾವಿಯಲ್ಲಿ ಒಂಬತ್ತು ಜನರ ಶವ ಪತ್ತೆಯಾಗಿದ್ದರ ಹಿಂದಿನ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ.
ತನಿಖೆಯ ನಂತರ ತಿಳಿದು ಬಂದಿದ್ದು ಇದೊಂದು 'Cold Blooded Murders' ಎಂದು ಸಾಬೀತಾಗಿದೆ. ಮೇ 22 ರಂದು ತೆಲಂಗಾಣದ ವಾರಂಗಲ್ ಜಿಲ್ಲೆಯ ಗೋರೆಕುಂಟ ಬಾವಿಯಲ್ಲಿ ಒಂದೇ ಕುಟುಂಬದ 5 ಮಂದಿ ಸೇರಿದಂತೆ ಒಟ್ಟು 9 ಜನರ ಶವಗಳು ಪತ್ತೆಯಾಗಿದ್ದವು. ಮೃತಪಟ್ಟವರನ್ನು ಮಕ್ಸೂದ್ ಅಲಮ್ (50), ಆತನ ಹೆಂಡತಿ ನಿಶಾ (45), ಮಕ್ಕಳಾದ ಶಬಾದ್ (22), ಸೊಹೈಲ್ (20) ಮತ್ತು ಅವರ ಮೂರು ವರ್ಷದ ಮಗ ಹುಸೇನ್, ಕಾರ್ಮಿಕರಾದ ಬಿಹಾರದ ಶ್ರೀರಾಮ್, ಶ್ಯಾಮ್ ಮತ್ತು ತ್ರಿಪುರದ ಶಕೀಲ್ ಅಹ್ಮದ್ ಎಂದು ಗುರುತಿಸಲಾಗಿತ್ತು.
4 ವರ್ಷ, 6 ಕೊಲೆ; ಸರಣಿ ಹಂತಕಿ ಜಾಲಿ ಜೋಸೆಪ್ ಕೊಲೆಗಾಗಿ ಬಳಸಿದ್ದು ಸೈನಡ್ ಅಲ್ಲ!
ಮೃತರೆಲ್ಲ ವಾರಂಗಲ್ನ ಸೆಣಬು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಸಾವನ್ನಪ್ಪಿದವರ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿರಲಿಲ್ಲ. ಲಾಕ್ಡೌನ್ ನಿಂದ ಆಹಾರವಿಲ್ಲದೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು.
ತೆಲಂಗಾಣದ ಬಾವಿಯೊಂದರಲ್ಲಿ 9 ಮಂದಿಯ ಶವ ಪತ್ತೆ
ಆದರೆ, ವಾರಂಗಲ್ ಪೊಲೀಸರು ತೀವ್ರ ತನಿಖೆಯ ನಂತರ ಒಂಬತ್ತು ಜನರನ್ನು ಮುಗಿಸಿದ ಹಂತಕನ ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿದ್ದಾರೆ. ಮೃತರ ಕುಟುಂಬದ ಸಂಬಂಧಿಯೇ ಈ ಒಂಬತ್ತು ಕೊಲೆ ಮಾಡಿದ್ದ ಎಂಬುದು ಸಾಬೀತಾಗಿದೆ. ಒಂದು ಕೊಲೆಯನ್ನು ಮುಚ್ಚಿಡಲು ಒಂಬತ್ತು ಕೊಲೆ ಮಾಡಿದ ರೋಚಕ ಕಹಾನಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ...
ಸೈಲೆಂಟ್ ಕಿಲ್ಲರ್ ಸಂಜಯ್
ಬಿಹಾರ ಮೂಲದ ಸಂಜಯ್ ಎನ್ನುವಾತ ವಾರಂಗಲ್ನ ಸೆಣಬು ಕಾರ್ಖಾನೆಯಲ್ಲಿ ಮಕ್ಸೂದ್ ಅಲಮ್ರೊಟ್ಟಿಗೆ ಕೆಲಸ ಮಾಡುತ್ತಿದ್ದ. ಸಂಜಯ್ ಮಕ್ಸೂದ್ನ ಸೋದರ ಸೊಸೆ ರಫಿಕಾಳನ್ನು ಮದುವೆಯಾಗಿದ್ದ. (ರಫಿಕಾಳಿಗೆ ಇದು ಎರಡನೇ ಮದುವೆಯಾಗಿತ್ತು) ರಫಿಕಾಳಿಗೆ ಮೊದಲೇ ಮೂವರು ಹೆಣ್ಣು ಮಕ್ಕಳಿದ್ದರು. ಆರಂಭದಲ್ಲಿ ಮಕ್ಸೂದ್ ಅಲಮ್ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದ ಸಂಜಯ್, ಕ್ರಮೇಣ ರಫಿಕಾಳದೊಂದಿಗೆ ಬೇರೆ ಕಡೆ ವಾಸವಾಗಿದ್ದ. ಇದೇ ವೇಳೆ ರಫಿಕಾಳ ದೊಡ್ಡ ಮಗಳನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ನೋಡಿದ್ದಾನೆ. ಆದರೆ, ಇದಕ್ಕೆ ರಫಿಕಾ ತೀವ್ರ ವಿರೋಧ ವ್ಯಕ್ತಪಡಿಸಿ, ಮಕ್ಸೂದ್ ಅಲಮ್ ಬಳಿ ದೂರು ಹೇಳಿದ್ದಳು. ಸಂಜಯ್ನಿಗೆ ಮಕ್ಸೂದ್ ಎಚ್ಚರಿಕೆ ನೀಡಿದ್ದರು.
ತಿದ್ದಿಕೊಳ್ಳುವಂತೆ ವಾರ್ನಿಂಗ್
ರಫಿಕಾ ಇರುವವರೆಗೆ ತನ್ನ ಕೆಲಸ ಆಗುವುದಿಲ್ಲ ಎಂದು ತಿಳಿದ ಸಂಜಯ್, ರಫಿಕಾಳನ್ನು ಮುಗಿಸುವ ಯೋಜನೆ ಹೂಡುತ್ತಾನೆ. ಇದರ ಸುಳಿವು ಮಕ್ಸೂದ್ ಆಲಮ್ಗೆ ಸಿಗುತ್ತದೆ. ಆಗ ಸಂಜಯ್ನಿಗೆ ಎಚ್ಚರಿಕೆ ನೀಡಿದ್ದ ಆಲಮ್ ಕುಟುಂಬ, ತಿದ್ದಿಕೊಳ್ಳುವಂತೆ ಹೇಳುತ್ತಾರೆ. ಇಲ್ಲದಿದಿದ್ದರೆ, ಪೊಲೀಸ್ಗೆ ತಿಳಿಸುತ್ತೇವೆ ಎಂದೂ ಸಹ ಹೇಳುತ್ತಾರೆ. ಸಂಜಯ್ನ ಸಂಚು ಉಳಿದ ಕಾರ್ಮಿಕರಿಗೂ ತಿಳಿದಿತ್ತು.
ಚಲಿಸುವ ರೈಲಿನಲ್ಲಿ ರಫಿಕಾಳ ಕೊಲೆ
ಕೆಲ ದಿನ ಒಳ್ಳೆಯವನಂತೆ ನಟಿಸಿದ್ದ ಸಂಜಯ್ ಮಾರ್ಚ್ 23 ರಂದು ರಫಿಕಾಳನ್ನು ಪಶ್ಚಿಮ ಬಂಗಾಳದ ತನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಗರೀಬ್ ರಥ ರೈಲನ್ನು ಹತ್ತಿ ಹೋಗುತ್ತಿದ್ದ. ಈ ವೇಳೆ ಮಧ್ಯರಾತ್ರಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಬಳಿ ರಫಿಕಾಳಿಗೆ ಮಜ್ಜಿಗೆಯಲ್ಲಿ ನಿದ್ರೆ ಮಾತ್ರೆ ಹಾಕಿ, ಆ ನಂತರ ಕತ್ತು ಹಿಸುಕಿ ಕೊಲೆ ಮಾಡಿರುತ್ತಾನೆ. ಶವವನ್ನು ಚಲಿಸುವ ರೈಲಿನಿಂದಲೇ ಎಸೆದು ಪರಾರಿಯಾಗಿರುತ್ತಾನೆ. ರಫಿಕಾಳ ಶವ ಗುರುತು ಸಿಗದಂತಾಗಿದ್ದರಿಂದ ಪಶ್ಚಿಮ ಗೋದಾವರಿಯ ಪೊಲೀಸರು ಅಪರಿಚಿತ ಶವ ಎಂದು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಎಲ್ಲರನ್ನೂ ಮುಗಿಸುವ ತೀರ್ಮಾನಕ್ಕೆ ಬರುತ್ತಾನೆ
ರಫಿಕಾಳನ್ನು ಮುಗಿಸಿ ವಾಪಸ್ ವಾರಂಗಲ್ಗೆ ಬಂದಿದ್ದ ಸಂಜಯ್. ಮಾರ್ಚ್ 24 ರಿಂದ ಕೊರೊನಾ ಲಾಕ್ಡೌನ್ ಜಾರಿಯಾಗಿದ್ದರಿಂದ ''ತಾನೂ ರಫಿಕಾಳ ಜೊತೆ ಹೋಗುವಾಗ ಟ್ರೈನ್ ತಪ್ಪಿಸಿಕೊಂಡೆ. ಅವಳಿಗೆ ಊರಿಗೆ ಹೋಗಲು ಹೇಳಿದೆ. ನಾನು ಲಾರಿಯೊಂದನ್ನು ಹಿಡಿದು ವಾರಂಗಲ್ಗೆ ಬಂದೆ'' ಎಂದು ಕಥೆ ಕಟ್ಟಿ ಮಕ್ಸೂದ್ ಆಲಮ್ ಬಳಿ ಹೇಳುತ್ತಾನೆ. ಕೆಲ ದಿನಗಳ ನಂತರ ರಫಿಕಾ ಊರು ತಲುಪಿಲ್ಲ ಎಂದು ಸಂಜಯ್ ಮೇಲೆ ಆಲಮ್ ಕುಟುಂಬಕ್ಕೆ ಅನುಮಾನ ಬರಲು ಪ್ರಾರಂಭವಾಗುತ್ತದೆ. ಇದರಿಂದ ಎಚ್ಚೆತ್ತುಕೊಂಡ ಸಂಜಯ್, ಮನೆಯಲ್ಲಿನ ಎಲ್ಲರನ್ನೂ ಮುಗಿಸುವ ತೀರ್ಮಾನಕ್ಕೆ ಬರುತ್ತಾನೆ.
ಆ ಕರಾಳ ರಾತ್ರಿ!
ಏಪ್ರೀಲ್ 20 ರ ರಾತ್ರಿ ಮಕ್ಸೂದ್ ಆಲಮ್ ಮನೆಗೆ ಹೋದ ಸಂಜಯ್, ಸಲುಗೆಯಿಂದ ವರ್ತಿಸಿ ಯಾಮಾರಿಸುತ್ತಾನೆ. ಪಾರ್ಟಿ ನೆಪದಲ್ಲಿ ಸ್ನೇಹ ಸಂಪಾದಿಸುತ್ತಾನೆ. ದಾಲ್ನಲ್ಲಿ ಸುಮಾರು 60 ನಿದ್ದೆ ಮಾತ್ರೆಗಳನ್ನು ಹಾಕಿ, ಮನೆಯಲ್ಲಿದ್ದ ಎಲ್ಲರಿಗೂ ತಿನಿಸುತ್ತಾನೆ. ತಾನೂ ತಿಂದಂತೆ ನಟಿಸುತ್ತಾನೆ. ಊಟ ಮಾಡಿದವರು ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಖಚಿತಪಡಿಸಿಕೊಂಡ ಸಂಜಯ್ ಆ ಕರಾಳ ರಾತ್ರಿ ಒಬ್ಬೊಬ್ಬರನ್ನೇ ಉಸಿರುಗಟ್ಟಿಸಿ ಕೊಂದು ಗೋಣಿ ಚೀಲದಲ್ಲಿ ಕಟ್ಟಿ, ಸೈಕಲ್ನಲ್ಲಿ ತೆಗೆದುಕೊಂಡು ಹೋಗಿ ಹತ್ತಿರದ ಬಾವಿಗೆ ಎಸೆದು ಬಂದಿರುತ್ತಾನೆ. ಇದಕ್ಕಾಗಿ ಸತತ ಮೂರು ಗಂಟೆಗಳ ಕಾಲ ಆತ ಶ್ರಮ ಹಾಕಿರುತ್ತಾನೆ. ಕಡೆಗೆ ತಾನಂದುಕೊಂಡಂತೆ ಸಾಧಿಸಿರುತ್ತಾನೆ.
ಕಂಬಿ ಹಿಂದೆ ಸೈಲೆಂಟ್ ಕಿಲ್ಲರ್ ಸಂಜಯ್
ಆರಂಭದಲ್ಲಿ ಲಾಕ್ಡೌನ್ ನಿಂದ ಆಹಾರ ಸಿಗದೇ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಈ ಸಾವುಗಳ ಸುತ್ತ ಊಹಾಪೋಹ ಹರಿದಾಡಿದ್ದವು. ಆದರೆ, ವಾರಂಗಲ್ನ ಪೊಲೀಸರ ಪರಿಶ್ರಮದಿಂದ ಹಂತಕನನ್ನು ನಾಲ್ಕೇ ದಿನದಲ್ಲಿ ಹೆಡೆಮುರಿಕಟ್ಟುತ್ತಾರೆ. ಮಕ್ಸೂದ್ ಆಲಮ್ ಹಾಗೂ ಸಂಜಯ್ ನಡೆಸಿದ್ದ ಮೊಬೈಲ್ ಕಾಲ್ ರೆಕಾರ್ಡ್ ಹಾಗೂ ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸಂಜಯ್ನನ್ನು ವಶಕ್ಕೆ ಪಡೆದ ಪೊಲೀಸ್ ಸತ್ಯ ಬಾಯಿ ಬಿಡಿಸಿದ್ದಾರೆ. ವಲಸೆ ಕಾರ್ಮಿಕರನ್ನು ತನ್ನ ವಿಕೃತ ಉದ್ದೇಶ ತೀರಿಸಿಕೊಳ್ಳಲು ಕೊಲೆ ಮಾಡಿದ ಸಂಜಯ್ ಈಗ ಕಂಬಿ ಹಿಂದೆ ಬಿದ್ದಿದ್ದಾನೆ. ರಫಿಕಾಳ ಮೂವರು ಮಕ್ಕಳನ್ನು ಸದ್ಯ ಬಾಲಾಪರಾಧಿಗಳ ಕಲ್ಯಾಣ ಕೇಂದ್ರದಲ್ಲಿ ಇರಿಸಲಾಗಿದೆ.