ಆಂಧ್ರ: ಡೈನಮೈಟ್ ಸ್ಟೋಟ 9 ಕಲ್ಲು ಕ್ವಾರಿ ಕಾರ್ಮಿಕರ ದುರ್ಮರಣ
ಕರ್ನೂಲು, ಆಗಸ್ಟ್ 03: ಆಂಧ್ರಪ್ರದೇಶದ ಕರ್ನೂಲಿನಲ್ಲಿ ಇಂದು ರಾತ್ರಿ ಸಂಭವಿಸಿರುವ ಡೈನಮೈಟ್ ಸ್ಪೋಟ ದುರಂತದಲ್ಲಿ ಕನಿಷ್ಟ 9 ಮಂದಿ ಕಾರ್ಮಿಕರು ಮರಣಿಸಿದ್ದಾರೆ.
ಕರ್ನೂಲು ಜಿಲ್ಲೆಯ ಆಲೂರು ಮಂಡಲದ ಹಿತ್ತಲ ಬೆಲಗಲ ಗ್ರಾಮದಲ್ಲಿ ಕಲ್ಲು ಬಂಡೆ ಒಡೆಯಲು ಇಟ್ಟಿದ್ದ ಡೈನಮೈಟ್ ಸ್ಪೋಟಗೊಂಡು ಕನಿಷ್ಟ 9 ಮಂದಿ ಕಲ್ಲು ಕ್ವಾರಿ ಕಾರ್ಮಿಕರು ಮೃತರಾಗಿದ್ದರು. ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಇದೆ.
ಘಟನಾ ಸ್ಥಳದಲ್ಲಿ ಇದ್ದವರ ಪ್ರಕಾರ ಅಲ್ಲಿ 15 ಮಂದಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಪೊಲೀಸರು ಈವರೆಗೆ 5 ಶವಗಳನ್ನು ಪತ್ತೆ ಮಾಡಿದ್ದು, ಇನ್ನೂ ನಾಲ್ಕು ಶವಗಳು ಗುರುತೇ ಸಿಗದಂತಾಗಿವೆ. 6 ಮಂದಿ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸರ ಪ್ರಕಾರ ಬಹುತೇಕ ಕಾರ್ಮಿಕರು, ಬಿಹಾರ ಮತ್ತು ಪಂಜಾಬ್ ರಾಜ್ಯದವರಾಗಿದ್ದಾರೆ. ನಿಧನ ಹೊಂದಿದವರ ಕುಟುಂಬಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ.
ಆಂಧ್ರದ ಟಿಡಿಪಿ ಪಕ್ಷ ಸೇರಿದಂತೆ ಹಲವು ಮುಖಂಡರು ಈ ಬಗ್ಗೆ ಟ್ವೀಟ್ ಮಾಡಿದ್ದು, ಸತ್ತವರ ಆತ್ಮಕ್ಕೆ ಶಾಂತಿ ಕೋರುವುದಾಗಿ ತಿಳಿಸಿದ್ದಾರೆ. ಪೊಲೀಸರು ಘಟನೆ ಕುರಿತು ಹೆಚ್ಚಿನ ತನಿಕೆ ನಡೆಸುತ್ತಿದ್ದಾರೆ.