ತೆಲಂಗಾಣ: ಕೊರೊನಾ ಸೋಂಕಿತರ ಪೈಕಿ ಶೇ.85 ರಷ್ಟು ಮಂದಿಗೆ ನಿಜಾಮುದ್ದೀನ್ ನಂಟು
ಹೈದರಾಬಾದ್, ಏಪ್ರಿಲ್ 11: ತೆಲಂಗಾಣದಲ್ಲಿರುವ ಒಟ್ಟು ಕೊರೊನಾ ಸೋಂಕಿತರ ಪೈಕಿ ಶೇ.85ರಷ್ಟು ಮಂದಿಗೆ ದೆಹಲಿಯ ತಬ್ಲಿಘಿ ಜಮಾತ್ ಮರ್ಕಜ್ ನಂಟಿರುವುದಾಗಿ ದೃಢಪಟ್ಟಿದೆ.
ಏಪ್ರಿಲ್ 7ರ ಬಳಿಕ ತೆಲಂಗಾಣವನ್ನು ಕೊರೊನಾ ಮುಕ್ತವನ್ನಾಗಿಸುತ್ತೇವೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತಿಳಿಸಿದ್ದರು. ಆದರೆ ಅವರ ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಗಿದೆ.
ಕೊರೊನಾ ಲಾಕ್ಡೌನ್: ಜೂನ್ವರೆಗೆ ವಿಸ್ತರಣೆಗೆ ತೆಲಂಗಾಣ ಸರ್ಕಾರ ಮನವಿ
ಈಗಿರುವ ಒಟ್ಟು ಪ್ರಕರಣಗಳ ಪೈಕಿ ಶೇ.85 ರಷ್ಟು ಕೊರೊನಾ ಪ್ರಕರಣಗಳು ತಬ್ಲಿಘಿ ಜಮಾತ್ಗೆ ಸಂಬಂಧಿಸಿವೆ ಎನ್ನುವ ಆತಂಕಕಾರಿ ಮಾಹಿತಿ ತಿಳಿದುಬಂದಿದೆ. ತೆಲಂಗಾಣ ಆರೋಗ್ಯ ಸಚಿವ ಇಟಾಲ ರಾಜೇಂದ್ರ ಅವರು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದ್ದರು.
ತೆಲಂಗಾಣದಲ್ಲಿ 8500 ಮಂದಿ ತಪಾಸಣೆ
ತೆಲಂಗಾಣದಲ್ಲಿ ಒಟ್ಟು 8500 ಮಂದಿಯನ್ನು ತಪಾಸಣೆ ಮಾಡಲಾಗಿತ್ತು. ಅವರಲ್ಲಿ 471 ಮಂದಿಯಲ್ಲಿ ಪಾಸಿಟಿವ್ ಬಂದಿದೆ. 12 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ 45 ಮಂದಿ ಆಸ್ಪತ್ರಯಿಂದ ಬಿಡುಗಡೆ ಹೊಂದಿದ್ದಾರೆ.
ಜಮಾತ್ನಿಂದ ಬಂದವರೇ ಹೆಚ್ಚು
ತೆಲಂಗಾಣದಲ್ಲಿ ಕೊರೊನಾ ಒಟ್ಟು ಪ್ರಕರಣಗಳ ಪೈಕಿ ದೆಹಲಿಯಿಂದ ಬಂದವರೇ ಹೆಚ್ಚು ಮಂದಿ ಇದ್ದಾರೆ. ತೆಲಂಗಾಣವನ್ನು ಕೊರೊನಾ ಮುಕ್ತವನ್ನಾಗಿಸುವ ಮುಖ್ಯಮಂತ್ರಿ ಕನಸಿಗೆ ತಣ್ಣೀರೆರೆಚಿದಂತಾಗಿದೆ. ಶೇ.85 ರಷ್ಟು ಮಂದಿ ದೆಹಲಿಯ ತಬ್ಲಿಘಿ ಜಮಾತ್ ಮರ್ಕಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಾಗಿದ್ದಾರೆ.
ಭಾರತದಲ್ಲಿ ಒಟ್ಟು 7447 ಮಂದಿ ಸೋಂಕಿತರು
ಭಾರತದಲ್ಲಿ ಒಟ್ಟು 7447 ಮಂದಿ ಕೊರೊನಾ ಸೋಂಕಿತರಿದ್ದಾರೆ. ಕಳೆದ 24 ಗಂಟೆಗಳಲ್ಲಿ 40 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಮೃತರ ಸಂಖ್ಯೆ 239ಕ್ಕೆ ಏರಿಕೆಯಾಗಿದೆ.
ಲಾಕ್ಡೌನ್ ವಿಸ್ತರಣೆ ಬಗ್ಗೆ ಮೋದಿ ಚರ್ಚೆ
ಲಾಕ್ಡೌನ್ ಅವಧಿ ಏಪ್ರಿಲ್ 14ಕ್ಕೆ ಮುಕ್ತಾಯವಾಗುತ್ತಿದೆ. ಮುಂದಿನ 15 ದಿನಗಳ ಕಾಲ ಲಾಕ್ಡೌನ್ ಮುಂದುವರೆಸಬೇಕು ಎಂದು ಸಾಕಷ್ಟು ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಇದರ ಕುರಿತು ಇನ್ನೇನು ಅಂತಿಮ ತೀರ್ಮಾನ ಹೊರಬೀಳಲಿದೆ.