ಹೈದರಾಬಾದ್; ಮೃಗಾಲಯದಲ್ಲಿ ಬಿಳಿ ಹುಲಿ ಸಾವು
ಹೈದರಾಬಾದ್, ಜೂನ್ 25 : ತೆಲಂಗಾಣದ ಹೈದರಾಬಾದ್ ನಗರದ ನೆಹರೂ ಮೃಗಾಲಯದಲ್ಲಿ ಬಿಳಿ ಹುಲಿ ಸಾವನ್ನಪ್ಪಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಬಿಳಿ ಹುಲಿಗೆ ಮೇ 29ರಿಂದ ಚಿಕಿತ್ಸೆ ನೀಡಲಾಗುತ್ತಿತ್ತು.
ಕಿರಣ್ ಎಂಬ 8 ವರ್ಷದ ಗಂಡು ಬಿಳಿ ಹುಲಿಯು ಸಾವನ್ನಪ್ಪಿದೆ. ನೆಹರೂ ಮೃಗಾಲಯದಲ್ಲಿಯೇ ಇದು ಜನಿಸಿತ್ತು. ಭದ್ರಿ ಮತ್ತು ಸಮೀರಾಗೆ ಜನಿಸಿದ ಬಿಳಿ ಹುಲಿ ಇದಾಗಿತ್ತು.
ನಾಗರಹೊಳೆ ಕಾಡಂಚಿನಲ್ಲೀಗ ಹುಲಿ ನಂತರ ಶುರುವಾಯ್ತು ಚಿರತೆ ಕಾಟ
ಬಿಳಿ ಹುಲಿ ಕಿರಣ್ ಕುತ್ತಿಗೆಯ ಕೆಳ ಭಾಗದಲ್ಲಿ ಗೆಡ್ಡೆಯೊಂದು ಆಗಿತ್ತು. ಮೃಗಾಲಯದ ಐಸಿಯು ವಾರ್ಡ್ನಲ್ಲಿ ಮೇ 29ರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ತಜ್ಞ ವೈದ್ಯರ ತಂಡ ಹುಲಿಗೆ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದೆ.
ಮೈಸೂರಿನಲ್ಲಿ ಕುರಿಗಾಹಿ ಹತ್ಯೆ ಮಾಡಿದ್ದ ನರಭಕ್ಷಕ ಹುಲಿ ಸೆರೆ
ಇದೇ ಮೃಗಾಲಯದಲ್ಲಿ ಭದ್ರಿ (12) ಮತ್ತು ರುದ್ರ (14) ಎಂಬ ಎರಡು ಬಿಳಿ ಹುಲಿಗಳು ಹೀಗೆ ಕುತ್ತಿಗೆಯ ಭಾಗದಲ್ಲಿ ಗೆಡ್ಡೆಗಳು ಉಂಟಾಗಿ ಮೃತಪಟ್ಟಿದ್ದವು. ಕಿರಣ್ 8 ವರ್ಷವಾಗಿರುವಾಗಲೇ ಸಾವನ್ನಪ್ಪಿದೆ.
ಚಾಮರಾಜನಗರದಲ್ಲಿ ಕೊನೆಗೂ ಸೆರೆ ಸಿಕ್ಕ ಹುಲಿ
ನೆಹರು ಮೃಗಾಲಯದ ಅಧಿಕಾರಿಗಳು ಜೀವಕೋಶೀಯ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರ (ಸಿಸಿಎಂಬಿ)ಕ್ಕೆ ಈ ಕುರಿತು ಮಾಹಿತಿ ನೀಡಿದ್ದಾರೆ. ಮೂರು ಗಂಡು ಹುಲಿಗಳು ಒಂದೇ ತರನಾದ ಕಾಯಿಲೆಯಿಂದ ಮೃತಪಟ್ಟಿರುವುದಕ್ಕೆ ಕಾರಣ ಏನು? ಎಂದು ವರದಿ ನೀಡುವಂತೆ ಮನವಿ ಮಾಡಿದೆ.
ಪಶು ವೈದ್ಯಕೀಯ ಕಾಲೇಜಿನ ಸಿಬ್ಬಂದಿಗಳು ಮೃತ ಹುಲಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದು, ವರದಿ ಇನ್ನೂ ಬರಬೇಕಿದೆ. ಹುಲಿಯ ಉಸಿರಾಟ ನಾಳದಲ್ಲಿಯೂ ಚಿಕ್ಕ ಚಿಕ್ಕ ಗೆಡ್ಡೆಗಳಾಗಿತ್ತು ಎಂಬ ಮಾಹಿತಿ ಸಿಕ್ಕಿದ್ದು, ವರದಿಗಾಗಿ ಕಾಯಲಾಗುತ್ತಿದೆ.