6 ವರ್ಷದ ಇಶಾನ್ ಗೆ 1 ದಿನ ಪೊಲೀಸ್ ಕಮಿಷನರ್ ಕುರ್ಚಿ ಬಿಟ್ಟುಕೊಟ್ಟರು
ಹೈದರಾಬಾದ್, ಏಪ್ರಿಲ್ 4: ಆ ಬಾಲಕನಿಗೆ ಆರು ವರ್ಷ. ಆತನ ಹೆಸರು ಇಶಾನ್. ಪೊಲೀಸ್ ಕಮಿಷನರ್ ಆಗಬೇಕು ಅನ್ನೋದು ಇಶಾನ್ ನ ಕನಸು. ಅದನ್ನು ಈಡೇರಿಸುವ ಸಲುವಾಗಿಯೇ ಬುಧವಾರ (ಏಪ್ರಿಲ್ 4) ರಚ್ಚಕೊಂಡ ಪೊಲೀಸರು ಇಡೀ ದಿನ ಮೀಸಲಿಟ್ಟರು.
ಕ್ಯಾನ್ಸರ್ ಪೀಡಿತ ಬಾಲಕನಿಗೆ ಪೊಲೀಸ್ ಸಮವಸ್ತ್ರದ ಪುಳಕ
ಒಂದು ದಿನದ ಮಟ್ಟಿಗೆ ಇಶಾನ್ ಪೊಲೀಸ್ ಕಮಿಷನರ್ ಆಗಿ ಜವಾಬ್ದಾರಿ ಸ್ವೀಕರಿಸಿದ. "ಸಮಾಜ ಘಾತುಕ ಶಕ್ತಿಗಳು, ಕಳ್ಳರು, ರೌಡಿಗಳನ್ನು ಹೆಡೆಮುರಿ ಕಟ್ಟಿ ತಂದು ಕಂಬಿ ಹಿಂದೆ ಕೂರಿಸಬೇಕು" ಅನ್ನೋದು ಇಶಾನ್ ಇಚ್ಛೆ ಎಂದು ನಿಜವಾದ ಕಮಿಷನರ್ ಮಹೇಶ್ ಎಂ ಭಾಗ್ವತ್ ಹೇಳಿದರು.
ಅಂದಹಾಗೆ, ಇಶಾನ್ ಗೆ ಕ್ಯಾನ್ಸರ್ ಕಾಯಿಲೆ ಇದೆ. ಆತ ಮೂಲತಃ ಮೇಡಕ್ ಜಿಲ್ಲೆಯ ಕುಂಚನಪಲ್ಲಿಯವನು. ಇಶಾನ್ ನ ಆಸೆ ಪೂರೈಸುವ ಸಲುವಾಗಿ ಭಾಗ್ವತ್ ಸ್ವತಃ ತಮ್ಮ ಕುರ್ಚಿಯೇ ಮೇಲೆ ಈ ಪುಟ್ಟ ಕಮಿಷನರ್ ನ ಕೂಡಿಸಿದ್ದಾರೆ. ಚಾಂದ್ ಪಾಷಾ-ಹಸೀನಾ ದಂಪತಿಯ ಎರಡನೇ ಮಗ ಇಶಾನ್ ಗೆ ಎಂಎನ್ ಜೆ ಕ್ಯಾನ್ಸರ್ ಇನ್ ಸ್ಟಿಟ್ಯೂಟ್ ನಲ್ಲಿ ಚಿಕಿತ್ಸೆ ನಡೆಯುತ್ತಿದೆ.
Telangana: D Ishan, a student of class 2 suffering from blood cancer, was made Commissioner of Rachakonda Police Commissionerate for a day. pic.twitter.com/Xva9sX2qaK
— ANI (@ANI) 4 April 2018
ಅವನ ಇಚ್ಛೆ ಏನು ಎಂಬುದನ್ನು ಆ ಕ್ಯಾನ್ಸರ್ ಇನ್ ಸ್ಟಿಟ್ಯೂಟ್ ತಿಳಿದುಕೊಂಡಿತು. ರಚ್ಚಕೊಂಡ ಪೊಲೀಸರು ಆ ಇಚ್ಛೆಯನ್ನು ಪೂರೈಸಲು ಸಹಕರಿಸಿದರು. ಪೊಲೀಸ್ ದಿರಿಸಿನಲ್ಲಿ ನಗುಮೊಗದಿಂದ ಕಾಣಿಸಿಕೊಂಡವನು ಇಶಾನ್. ಆದರೆ ಅಲ್ಲಿದ್ದವರ ಕಣ್ಣಾಲಿಗಳಲ್ಲಿ ನೀರಿತ್ತು.