ಕೊರೊನಾ: ದೆಹಲಿಯಲ್ಲಿ ಮಸೀದಿಗೆ ತೆರಳಿದ್ದ ತೆಲಂಗಾಣದ 6 ಮಂದಿ ಸಾವು
ಹೈದರಾಬಾದ್, ಮಾರ್ಚ್ 31: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮಸೀದಿಗೆ ತೆರಳಿದ್ದ ತೆಲಂಗಾಣದ 6 ಮಂದಿ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಎಂದು ತೆಲಂಗಾಣ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಸೋಂಕಿಗೆ ತುತ್ತಾದವರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದ್ದು, ಸೋಮವಾರ ಮತ್ತೆ 42 ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 1300ಕ್ಕೆ ಏರಿಕೆಯಾಗಿದೆ.
ನಿಜಾಮುದ್ದೀನ್ ಮಸೀದಿಯ ಧಾರ್ಮಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಆರು ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂಬುದಾಗಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಈ ಮಾಹಿತಿ ಅಕ್ಷರಶಃ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಇನ್ನೊಬ್ಬರು ಶ್ರೀನಗರದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಪೈಕಿ 7 ಜನರು ಅಸುನೀಗಿದ್ದಾರೆ. ಆ ಮೂಲಕ ದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ 32ಕ್ಕೆ ಏರಿಕೆಯಾದಂತಾಗಿದೆ.
ಕೊರೊನಾ ಸೋಂಕಿತನೊಂದಿಗೆ ಸಂಪರ್ಕ: 6 ವೈದ್ಯರು, 4ನರ್ಸ್ಗೆ ಗೃಹಬಂಧನ
ದೆಹಲಿಯಲ್ಲಿ ಮಾರ್ಚ್ 18ರಂದು ನಡೆದ ಧಾರ್ಮಿಕ ಕಾರ್ಯಕ್ರಮ ಈಗ ದೊಡ್ಡ ಅಪಾಯ ತಂದೊಡ್ಡುವ ಸಾಧ್ಯತೆ ಇದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಪೈಕಿ 7 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಬೆನ್ನಲ್ಲೇ ಸೋಮವಾರ ಇಡೀ ಪ್ರದೇಶವನ್ನು ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ.
ಜನರ ಚಲನವಲನದ ಮೇಲೆ ನಿಗಾ ಇಡಲು ಡ್ರೋನ್ಗಳನ್ನೂ ಬಳಸಿಕೊಳ್ಳಲಾಗುತ್ತಿದೆ. 200 ಮಂದಿಯನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ.
ಇವರ ಸಂಪರ್ಕಕ್ಕೆ ಬಂದ 2,000 ಕ್ಕಿಂತ ಹೆಚ್ಚು ಜನರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಆರೋಗ್ಯ ಸಚಿವಾಲಯ, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
ಮಾರ್ಚ್ 10ರಂದು ನಡೆದ ಈ ಕಾರ್ಯಕ್ರಮದಲ್ಲಿ ಮಲೇಷ್ಯಾ, ಇಂಡೋನೇಷ್ಯಾ, ಸೌದಿ ಅರೇಬಿಯಾ, ಕಜಕಿಸ್ಥಾನದಿಂದ ಅನೇಕರು ಭೇಟಿ ಕೊಟ್ಟಿದ್ದರು. ದೇಶದ ಹಲವು ಭಾಗಗಳಿಂದಲೂ ಹಲವರು ಭೇಟಿ ನೀಡಿ ಊರುಗಳಿಗೆ ತೆರಳಿದ್ದಾರೆ. ಈಗಾಗಲೇ ತೆರಳಿರುವ ವ್ಯಕ್ತಿಗಳಿಂದ ಸೋಂಕು ಬೇರೆ ಕಡೆ ಹರಡಿರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.