ಹೈದರಾಬಾದ್ ನ ಅತ್ತಾಪುರ ಬಳಿ ಅಗ್ನಿ ಅವಘಡ, 6 ಜನ ಭಸ್ಮ
ಹೈದರಾಬಾದ್, ಫೆಬ್ರವರಿ. 22 : ಏರ್ ಕೂಲರ್ ಗಳ ತಯಾರಿಕಾ ಘಟಕದಲ್ಲಿ ಬೆಂಕಿ ದುರಂತಕ್ಕೆ ಆರು ಜನ ಸಜೀವ ದಹನಗೊಂಡಿರುವ ದಾರುಣ ಘಟನೆ ಹೈದರಾಬಾದ್ ನ ಅತ್ತಾಪುರದಲ್ಲಿ ಬುಧವಾರ ಸಂಭವಿಸಿದೆ.
ಹೈದರಾಬಾದ್ ರಾಜೇಂದ್ರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅತ್ತಾಪುರ್ ನ ಐರನ್ ಶೀಟ್ ಗಳನ್ನು ತಯಾರಿಸುವ ಏ-1 ಏರ್ಕೂಲರ್ಸ್ ಎಂಬ ಹೆಸರಿನ ಸಣ್ಣ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.[ಸರಸವಾಡುತ್ತಿದ್ದ ಪತ್ನಿಯನ್ನು ರೆಡ್ ಹ್ಯಾಂಡಾಗಿ ಹಿಡಿದ ಟೆಕ್ಕಿ]
ಘಟಕದಲ್ಲಿ ಮಲಗಿದ್ದ ಒಡಿಶಾ, ಛತ್ತೀಸ್ ಗಢ ಮತ್ತು ಬಿಹಾರ ಮೂಲದ ಆರು ಕಾರ್ಮಿಕರು ಬೆಂಕಿಗಾಹುತಿಯಾಗಿದ್ದಾರೆ. ಏರ್ ಕೂಲರ್ ನ ಶಾರ್ಟ್ ಸರ್ಕ್ಯೂಟ್ ಈ ದುರ್ಘಟನೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ರಾಜೇಂದ್ರನಗರ ಸಹಾಯಕ ಪೊಲೀಸ್ ಆಯುಕ್ತ ಗಂಗಿ ರೆಡ್ಡಿ ತಿಳಿಸಿದ್ದಾರೆ.
ನತದೃಷ್ಟ ಕಾರ್ಮಿಕರು ಎಚ್ಚೆತ್ತುಕೊಳ್ಳುವುದಕ್ಕೆ ಮುನ್ನವೇ ಇಡೀ ಘಟಕವನ್ನು ಬೆಂಕಿ ಆವರಿಸಿದೆ. ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು.
ಬಳಿಕ ನಾಲ್ಕು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದರು. ನಂತರ ಸುಟ್ಟು ಕರಕಲಾದ ಆವಶೇಷಗಳನ್ನು ತೆರವುಗೊಳಿಸಿ ನೋಡಿದಾಗ ಆರು ಕಾರ್ಮಿಕರು ಸಜೀವ ದಹನಗೊಂಡಿದ್ದರು.
ಮೃತ ದೇಹಗಳನ್ನು ಶವ ಪರೀಕ್ಷೆಗಾಗಿ ಉಸ್ಮಾನಿಯ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಶಂಶಾಬಾದ್ ಜಿಲ್ಲಾಧಿಕಾರಿ ಪಿವಿ ಪದ್ಮಜ ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಘಟಕದ ಮಾಲೀಕ ಪ್ರಮೋದ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.