ತೆಲಂಗಾಣದಲ್ಲಿ ಬದುಕಿ ಬರಲಿಲ್ಲ ಕೊಳವೆ ಬಾವಿಗೆ ಬಿದ್ದ 3 ವರ್ಷದ ಕಂದಮ್ಮ!
ಹೈದ್ರಾಬಾದ್, ಮೇ.28: ತೆರೆದ ಕೊಳವೆ ಬಾವಿಗೆ ಬಿದ್ದ 3 ವರ್ಷದ ಪುಟ್ಟ ಕಂದಮ್ಮ ಕೊನೆಗೂ ಬದುಕಿ ಬರಲಿಲ್ಲ. ತೆಲಂಗಾಣದಲ್ಲಿ ರಾತ್ರಿಯಿಡೀ ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದ ಮಗುವಿನ ಪ್ರಾಣ ಉಳಿಸುವುದಕ್ಕೆ ಸಾಧ್ಯವಾಗಲಿಲ್ಲ.
Recommended Video
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಬುಧವಾರ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿದ 120 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಮಗುವಿನ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ.
ತೆಲಂಗಾಣದಲ್ಲಿ 120 ಅಡಿ ಕೊಳವೆ ಬಾವಿಗೆ ಬಿದ್ದ 3 ವರ್ಷದ ಮಗು
ತೆಲಂಗಾಣದ ರಾಜಧಾನಿ ಹೈದ್ರಾಬಾದ್ ನಿಂದ ಕೇವಲ 100 ಕಿಲೋ ಮೀಟರ್ ದೂರದಲ್ಲಿರುವ ಮೇದಕ್ ಜಿಲ್ಲೆಯ ಪೋಚಂಪಲ್ಲಿ ಗ್ರಾಮದಲ್ಲಿ ನಡೆದ ಕೊಳವೆ ಬಾವಿ ದುರಂತದಲ್ಲಿ 3 ವರ್ಷದ ಮಗು ಸಾಯಿವರ್ಧನ್ ಬಲಿಯಾಗಿದೆ.
ಬುಧವಾರ ಸಂಜೆ ನಡೆದ ಕೊಳವೆ ಬಾವಿ ದುರಂತ
ತೆಲಂಗಾಣದ ಮೇದಕ್ ಜಿಲ್ಲೆಯ ಪೋಚಂಪಲ್ಲಿ ಪ್ರದೇಶದಲ್ಲಿ ತೋಟದಲ್ಲಿ ಆಟವಾಡುತ್ತಿದ್ದ ಸಾಯಿ ವರ್ಧನ್, ಬುಧವಾರ ಸಂಜೆ 5 ಗಂಟೆ ವೇಳೆಗೆ ಅದೇ ತೋಟದಲ್ಲಿ ಕೊರೆದಿದ್ದ 120 ಅಡಿ ಕೊಳವೆ ಬಾವಿಗೆ ಬಿದ್ದಿದ್ದಾನೆ.
ತೋಟದಲ್ಲಿ ಕಳೆದ ವಾರವಷ್ಟೇ ಕೊರೆಸಿದ್ದ ಕೊಳವೆ ಬಾವಿ
ಕಳೆದ ವಾರವಷ್ಟೇ 3 ವರ್ಷದ ಸಾಯಿ ವರ್ಧನ್ ಅಜ್ಜ ಬಿಕ್ಷಾಪತಿ ಎಂಬುವವರು ತಮ್ಮ ಕೃಷಿ ಜಮೀನಿನಲ್ಲಿ ಮೂರು ಬೋರ್ ವೆಲ್ ಗಳನ್ನು ಕೊರೆಸಿದ್ದರು. ಆದರೆ ಈ ಮೂರರ ಪೈಕಿ ಒಂದರಲ್ಲೂ ನೀರು ಬಂದಿರಲಿಲ್ಲ. ಇನ್ನೇನು ಕೊಳವೆ ಬಾವಿಗಳನ್ನು ಮುಚ್ಚಬೇಕು ಎಂದುಕೊಳ್ಳುವಷ್ಟರಲ್ಲೇ ದುರಂತ ನಡೆದು ಹೋಗಿದೆ ಎಂದು ಬಾಲಕನ ತಂದೆ ಗೋವರ್ಧನ್ ತಿಳಿಸಿದ್ದಾರೆ.
ಅಜ್ಜನ ಮನೆಗೆ ರಜೆ ದಿನಗಳನ್ನು ಕಳೆಯಲು ತೆರಳಿದ್ದ ಮಗು
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪತಂಚೇರು ಮೂಲದ 3 ವರ್ಷದ ಬಾಲಕ ಸಾಯಿ ವರ್ಧನ್ ಅಜ್ಜನ ಮನಗೆ ರಜೆ ದಿನಗಳನ್ನು ಕಳೆಯಲೆಂದು ಸಾಯಿ ತೆರಳಿದ್ದನು. ಈ ವೇಳೆ ಮೇದಾಕ್ ಜಿಲ್ಲೆಯ ಪೋಚಂಪಲ್ಲಿಯ ತೋಟದಲ್ಲಿ ಆಟವಾಡಲು ತೆರಳಿದ್ದ ಮಗು ಕೊಳವೆ ಬಾವಿಗೆ ಬಿದ್ದಿತ್ತು.
ಎನ್ ಡಿಆರ್ಎಫ್ ತಂಡದಿಂದ ಕಾರ್ಯಾಚರಣೆ
ಇನ್ನು, 120 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಸಾಯಿ ವರ್ಧನ್ ರಕ್ಷಣೆಗೆ ಬುಧವಾರ ರಾತ್ರಿಯಿಡೀ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತು. ಅಂತಿಮವಾಗಿ ಮಗುವಿನ ಮೃತದೇಹವನ್ನು ಸುರಕ್ಷಿತವಾಗಿ ಹೊರಗೆ ತೆಗೆಯಲಾಯಿತು.