ತೆಲಂಗಾಣದಲ್ಲಿ ಕೈದಿಗಳ ಸಂಖ್ಯೆ ಇಳಿಕೆ; 17 ಜೈಲಿಗೆ ತಾತ್ಕಾಲಿಕವಾಗಿ ಬಾಗಿಲು
ಹೈದರಾಬಾದ್, ಮೇ 19: ತೆಲಂಗಾಣದಲ್ಲಿ ಇರುವ ಒಟ್ಟು 49 ಜೈಲುಗಳ ಪೈಕಿ 17 ಜೈಲನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕೈದಿಗಳ ಸಂಖ್ಯೆಯಲ್ಲಿ ಇಳಿಕೆ ಆಗಿರುವುದರಿಂದ ಈ ನಿರ್ಧಾರ ಮಾಡಲಾಗಿದ್ದು, ಇದೀಗ ಮುಚ್ಚಲಾದ ಜೈಲುಗಳನ್ನು ಸಮಾಜ ಕಲ್ಯಾಣ ಕೇಂದ್ರಗಳಿಗೆ ಬಳಸಲು ರಾಜ್ಯ ಕಾರಾಗೃಹ ಇಲಾಖೆ ತೀರ್ಮಾನಿಸಿದೆ.
ಇಲಾಖೆ ಮಾಹಿತಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಹದಿನೇಳು ಜೈಲುಗಳನ್ನು ಮುಚ್ಚಲಾಗಿದೆ. ಕೈದಿಗಳ ಸಂಖ್ಯೆಯಲ್ಲಿ ಇಳಿಮುಖವಾದ ಕಾರಣಕ್ಕೇ ಈ ನಿರ್ಧಾರ ಮಾಡಲಾಗಿದೆ. ಕೈದಿಗಳ ಸುಧಾರಣೆಗಾಗಿ ತೆಗೆದುಕೊಂಡ ಕ್ರಮಗಳಿಂದ ಇದು ಸಾಧ್ಯವಾಗಿದೆ. ಸಮಾಜದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಕೈದಿಗಳ ನೆರವನ್ನೇ ಪಡೆಯಲಾಗಿದೆ.
ಪಾಕ್ ಜೈಲುಗಳಲ್ಲಿ ಎಷ್ಟು ಮಂದಿ ಭಾರತೀಯರು ಕೊಳೆಯುತ್ತಿದ್ದಾರೆ ಗೊತ್ತೇ?
ಕೈದಿಗಳ ಸಂಖ್ಯೆಯು ಏಳರಿಂದ ಐದು ಸಾವಿರಕ್ಕೆ ಇಳಿಕೆಯಾಗಿದೆ. ಮಾಜಿ ಕೈದಿಗಳಿಗೆ ಸಾಮಾನ್ಯ ಜೀವನ ನಡೆಸಲು ನೆರವಾಗಿರುವುದರಿಂದಲೂ ಅನುಕೂಲವಾಗಿದೆ. ಇದೀಗ ಮುಚ್ಚಲಾದ ಜೈಲುಗಳನ್ನು ಸಮಾಜ ಕಲ್ಯಾಣ ಕೇಂದ್ರಗಳಾಗಿ ಅಥವಾ ಭಿಕ್ಷುಕರ, ಅನಾಥರ ಮತ್ತಿತರರ ಪುನರ್ವಸತಿ ಕೇಂದ್ರಗಳಾಗಿ, ಕನಿಷ್ಠ ಪಕ್ಷ ತಾತ್ಕಾಲಿಕವಾಗಿ ಬಳಸಬಹುದು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಇನ್ನು ಇಲಾಖೆಯಿಂದಲೇ ನೂರು ಪೆಟ್ರೋಲ್ ಬಂಕ್ ಅರಂಭಿಸಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಹೈದರಾಬಾದ್ ನಲ್ಲಿ ಹದಿನೆಂಟು ಪೆಟ್ರೋಲ್ ಬಂಕ್ ಹೈದರಾಬಾದ್ ಹಾಗೂ ಇತರ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ಬಿಡುಗಡೆಯಾದ ಕೈದಿಗಳು, ಸದ್ಯಕ್ಕೆ ಸಜೆ ಅನುಭವಿಸುತ್ತಿರುವವರು ಹಾಗೂ ಜೈಲಿನ ಮಾಜಿ ಅಧಿಕಾರಿಗಳು ಇವುಗಳನ್ನು ನಡೆಸುತ್ತಿದ್ದಾರೆ.
ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾವಿರ ಅಪರಾಧಿಗಳ ಪಟ್ಟಿ ತಯಾರಿಸಿ, ಅಂಥವರಿಗೆ ಈಗಾಗಲೇ ಉದ್ಯೋಗದಲ್ಲಿ ಅಥವಾ ಸ್ವಯಂ ಉದ್ಯೋಗಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಿಂತ ಭಿನ್ನ ಪ್ರಯೋಗ ಅಂದರೆ ಗೃಹ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡು, ಜೈಲಿನಿಂದ ಬಿಡುಗಡೆ ಆದ ಕೈದಿಗಳನ್ನೇ ಬಳಸಿಕೊಂಡು ಮನೆ ನಿರ್ಮಾಣ ಮಾಡಿ, ಅವುಗಳನ್ನು ಅತ್ಯಂತ ಕಡಿಮೆ ಲಾಭಕ್ಕೆ, ಎಷ್ಟು ವೆಚ್ಚ ತಗುಲುವುದೋ ಅದೇ ಮೊತ್ತಕ್ಕೆ ಮಾರಲು ಮುಂದಾಗಿದೆ.