ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಬೆಂಕಿ ಹಚ್ಚಿದ ಆರೋಪಿ
ಖಮ್ಮಂ, ಅಕ್ಟೋಬರ್ 05: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆರೋಪಿ ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 20 ವರ್ಷದ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ, ತೆಲಂಗಾಣದ ಖಮ್ಮಂ ಜಿಲ್ಲೆಯ ಮನೆಯೊಂದರಲ್ಲಿ ಕೆಲಸಕ್ಕಿದ್ದ 13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಮಾಲೀಕನ ಪುತ್ರ ಅತ್ಯಾಚಾರಕ್ಕೆ ಯತ್ನಿಸಿದ್ದು, ನಂತರ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಹತ್ರಾಸ್ ಅತ್ಯಾಚಾರ ಪ್ರಕರಣದ ಹತ್ತಾರು ಮುಖಗಳು: ಪೊಲೀಸ್, ಕುಟುಂಬ, ರಾಜಕೀಯ
ಆಕೆಯ ದೇಹ ಶೇ. 70 ರಷ್ಟು ಸುಟ್ಟಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.ಸೆಪ್ಟೆಂಬರ್ 18 ರಂದು ಈ ಘಟನೆ ನಡೆದಿದ್ದು, ಆ ಬಾಲಕಿಗೆ ಕೆಲಸ ನೀಡಿದ್ದ ವ್ಯಕ್ತಿ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಿದ್ದು, ಕುಟುಂಬದವರಿಗೆ ಘಟನೆ ತಿಳಿಯದಂತೆ ಮಾಡಿದ್ದಾರೆ.
ಮನೆಯಲ್ಲಿ ನಡೆದಿದ್ದೇನು ಎಂಬುದರ ಕುರಿತು ಬಾಲಕಿ ಇಂದು ಮಾಹಿತಿ ನೀಡಿದ್ದು ಬಾಲಕಿಯ ತಂದೆ ಇಂದು ಪೊಲೀಸರ ಬಳಿ ದೂರು ನೀಡಿದ್ದಾರೆ.
ರೂಮ್ ನಲ್ಲಿದ್ದಾಗ ಹಿಂದಿನಿಂದ ಬಂದ ಅಲ್ಲಂ ಮಾರಯ್ಯ, ತನ್ನೊಂದಿಗೆ ಮಲಗುವಂತೆ ಕೇಳಿದ್ದಾನೆ. ಇದಕ್ಕೆ ನಿರಾಕರಿಸಿದಾಗ ಬಟ್ಟೆ ಹರಿದು ಹಾಕಿ, ಬೆಂಕಿ ಹಚ್ಚಿದ್ದಾಗಿ ಆಸ್ಪತ್ರೆಯಲ್ಲಿ ಬಾಲಕಿ ಹೇಳಿದ್ದಾಳೆ.
ಮೇ ತಿಂಗಳಿನಿಂದ ಅಲ್ಲಂ ಸುಬ್ಬರಾವ್ ಮನೆಯಲ್ಲಿ ಆ ಬಾಲಕಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಆಕೆಯ ತಂದೆಯನ್ನು ಕರೆದು, ಕೆಲಸ ಮಾಡುತ್ತಿರುವಾಗ ಆಕಸ್ಮಿಕ ಅಗ್ನಿ ಅನಾಹುತದಿಂದ ಆಕೆ ಗಾಯಗೊಂಡಿರುವುದಾಗಿ ಸುಳ್ಳು ಹೇಳಿದ್ದರು.