ತೆಲಂಗಾಣ: ಕಾಂಗ್ರೆಸ್ಗೆ ಮರ್ಮಾಘಾತ ನೀಡಿದ ಸಿಎಂ ಚಂದ್ರಶೇಖರ್ ರಾವ್
ಹೈದರಾಬಾದ್, ಜೂನ್ 06: ಲೋಕಸಭೆ ಚುನಾವಣೆ ಬಳಿಕ ಕಂಗಾಲಾಗಿರುವ ಕಾಂಗ್ರೆಸ್, ದಕ್ಷಿಣ ರಾಜ್ಯಗಳಲ್ಲಿ ಅಷ್ಟೋ-ಇಷ್ಟೋ ಕ್ಷೇತ್ರಗಳನ್ನು ಗೆದ್ದಿದ್ದೇವೆ ಎಂಬ ಸಮಾಧನದಲ್ಲಿತ್ತು, ಆದರೆ ಇಲ್ಲಿಯೂ ಕಾಂಗ್ರೆಸ್ಗೆ ಭಾರಿ ಆಘಾತ ಎದುರಾಗುವ ಮುನ್ಸೂಚನೆ ಕಾಣುತ್ತಿದೆ.
ತೆಲಂಗಾಣದಲ್ಲಿ ಟಿಆರ್ಎಸ್ ಮುಖಂಡ ಸಿಎಂ ಚಂದ್ರಶೇಖರ ರಾವ್ ಅವರು ಕಾಂಗ್ರೆಸ್ಗೆ ಭಾರಿ ಆಘಾತ ನೀಡಲು ಮುಂದಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ.
ತೆಲಂಗಾಣದ ಕಾಂಗ್ರೆಸ್ ಅನ್ನು ಟಿಆರ್ಎಸ್ ನೊಂದಿಗೆ ವಿಲಿನ ಮಾಡಿ ಎಂದು ತೆಲಂಗಾಣದ ಕಾಂಗ್ರೆಸ್ ಶಾಸಕರು ಹೈಕಮಾಂಡ್ಗೆ ಮನವಿ ಮಾಡುತ್ತಿದ್ದಾರೆ.
ತೆಲಂಗಾಣದಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಶೇಖರ್ ರಾವ್ ಅವರ ಪಕ್ಷ ಟಿಆರ್ಎಸ್ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಪಕ್ಷ 19 ಕ್ಷೇತ್ರಗಳಲ್ಲಷ್ಟೆ ಗೆಲುವು ಸಾಧಿಸಿತ್ತು. ಅದರಲ್ಲಿ ಒಬ್ಬರು ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷ ವಿಲೀನಕ್ಕೆ ಕೇಳುತ್ತಿರುವ 11 ಕೈ ಶಾಸಕರು
18 ಕಾಂಗ್ರೆಸ್ ಶಾಸಕರಲ್ಲಿ 11 ಶಾಸಕರು ಕಾಂಗ್ರೆಸ್ ಅನ್ನು ಟಿಆರ್ಎಸ್ ಪಕ್ಷದೊಂದಿಗೆ ವಿಲೀನ ಮಾಡಬೇಕು ಎಂದು ಹೈಕಮಾಂಡ್ ಅನ್ನು ಮನವಿ ಮಾಡಿದ್ದಾರೆ. ಇನ್ನೂ ಮೂವರು ಶಾಸಕರು ಇದೇ ಹಾದಿಯನ್ನು ಹಿಡಯುವವರಿದ್ದಾರೆ ಎಂದು ಟಿಆರ್ಎಸ್ ಮುಖಂಡರು ಹೇಳಿದ್ದಾರೆ.
ಪಕ್ಷಾಂತರಕ್ಕೆ ತಯಾರಾಗಿರುವ ಕೈ ಶಾಸಕರು
ಹಾಗೊಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ತಮ್ಮ ಪಕ್ಷವನ್ನು ಟಿಆರ್ಎಸ್ ಜೊತೆ ವಿಲಿನ ಮಾಡಲಿಲ್ಲವೆಂದಲ್ಲಿ, ಈ ಎಲ್ಲ ಶಾಸಕರು ಟಿಆರ್ಎಸ್ ಪಕ್ಷವನ್ನು ಸೇರಿಕೊಳ್ಳುತ್ತಾರೆ ಎನ್ನಲಾಗಿದೆ. ಈ ಶಾಸಕರು ಟಿಆರ್ಎಸ್ ಸೇರುವುದು ಬಹುತೇಕ ಖಚಿತ ಎನ್ನಲಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಈ ಶಾಸಕರು ವಿಲೀನಕ್ಕೆ ಒತ್ತಾಯಿಸುತ್ತಿದ್ದಾರೆ.
ಉತ್ತಮ ಕುಮಾರ ರೆಡ್ಡಿ ರಾಜೀನಾಮೆ ಬೆನ್ನಲ್ಲೆ ಪಕ್ಷಾಂತರ
ತೆಲಂಗಾಣ ಕಾಂಗ್ರೆಸ್ನ ಅಧ್ಯಕ್ಷ ಉತ್ತಮ ಕುಮಾರ ರೆಡ್ಡಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಕಾರಣ ತನ್ನ ಶಾಸಕ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ನೀಡಿದ ಕೂಡಲೆ ಇತ್ತ ಪಕ್ಷಾಂತರ ಪರ್ವ ಆರಂಭವಾಗಿದೆ.
ಕಾಂಗ್ರೆಸ್ ನಿರ್ನಾಮಕ್ಕೆ ಟಿಆರ್ಎಸ್ ಯೋಜನೆ
ಕಾಂಗ್ರೆಸ್ ಪಕ್ಷಕ್ಕೆ ತೆಲಂಗಾಣದ ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಡೆ ಆಗಿರುವುದು ನಿಜವಾದರೂ, ತೆಲಂಗಾಣದಲ್ಲಿ ಕಾಂಗ್ರೆಸ್ ಪೂರ್ಣವಾಗಿ ನೆಲೆ ಕಳೆದುಕೊಂಡಿಲ್ಲ. ಬೇರು ಮಟ್ಟದಲ್ಲಿ ಪಕ್ಷ ಇನ್ನೂ ಉಸಿರಾಡುತ್ತಿದೆ. ಇದನ್ನು ಸ್ಪಷ್ಟವಾಗಿ ಅರಿತಿರುವ ಟಿಆರ್ಎಸ್, ಕಾಂಗ್ರೆಸ್ ಅನ್ನು ನಿರ್ನಾಮಗೊಳಿಸುವ ಯೋಜನೆ ರೂಪಿಸಿದೆ.
ನಾಲ್ಕು ಪರಿಷತ್ ಸದಸ್ಯರನ್ನು ತನ್ನತ್ತ ಸೆಳೆದುಕೊಂಡಿದೆ
ಡಿಸೆಂಬರ್ನಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಟಿಆರ್ಎಸ್ ಪಕ್ಷವು ಕಾಂಗ್ರೆಸ್ನ ನಾಲ್ಕು ವಿಧಾನ ಪರಿಷತ್ ಸದಸ್ಯರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು, ನಂತರ ಈಗ ಶಾಸಕರನ್ನು ತನ್ನ ಪಕ್ಷಕ್ಕೆ ಸೆಳೆದುಕೊಳ್ಳುತ್ತಿದೆ.