ಹುಬ್ಬಳ್ಳಿ ಕಿಮ್ಸ್ ವೈದ್ಯರ ಯಡವಟ್ಟು, ಸತ್ತು..ಬದುಕಿ...ಸತ್ತ ಯುವಕ!
ಹುಬ್ಬಳ್ಳಿ, ಜನವರಿ 8: "ವೈದ್ಯ ದೇವೋ ಭವ, ವೈದ್ಯನೇ ಜನರ ಪಾಲಿನ ರಕ್ಷಕ ಎನ್ನುತ್ತಾರೆ. ಒಂದೊಂದು ಘಳಿಗೆಯಲ್ಲಿ ಮನುಷ್ಯನನ್ನು ಬದುಕಿಸೊದು, ಸಾಯಿಸೊದು ವೈದ್ಯನ ಕೈಯಲ್ಲಿರುತ್ತದೆ. ಇನ್ನು ಸಾಯಿಸುತ್ತಿರುವನನ್ನು ಬದುಕಿಸಲು ವೈದ್ಯ ಲೋಕ ನಾನಾ ಕಸರತ್ತು ಮಾಡಿರುವ ಉದಾಹರಣೆಗಳು ಉಂಟು.
ಆದರೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಬದುಕಿದ್ದ ಮನುಷ್ಯನನ್ನೇ ಸಾಯಿಸಿ ಬಿಟ್ಟಿದ್ದಾರೆ. ಹೌದು...ಭಾನುವಾರ ಸಂಜೆ ಕಾರು ಅಪಘಾತದಲ್ಲಿ ಗಾಯಗೊಂಡು ಕೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಪ್ರವೀಣ್ ಮೂಳೆ (23)ನನ್ನು ಬದುಕಿರುವಾಗಲೇ, ಮೃತಪಟ್ಟಿದ್ದಾನೆಂದು ಶವಾಗಾರದಲ್ಲಿ ಇರಿಸಿದ್ದಾರೆ. ಬಳಿಕ ಸೋಮವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆಗೆ ಮುಂದಾದ ವೇಳೆ ಈತ ಉಸಿರಾಡುತ್ತಿರುವುದು ಬೆಳಕಿಗೆ ಬಂದಿದೆ.
ಆ ಕೂಡಲೇ ವೈದ್ಯರು ಪ್ರವೀಣ್ ನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಈಗಷ್ಟೇ 20 ನಿಮಿಷಗಳ ಹಿಂದೆ ಯುವಕ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಸಾಯುವ ಏಳು ಗಂಟೆ ಮೊದಲೇ ಯುವಕನನ್ನು ಶವಾಗಾರದಲ್ಲಿ ಇಟ್ಟಿರುವುದು ವೈದ್ಯರ ಬೇಜವಾಬ್ದಾರಿ ತೊರಿಸಿದೆ. ಈ ಯುವಕನ ಸಾವಿಗೆ ವೈದ್ಯರೇ ನೇರ ಕಾರಣ.
ಹುಬ್ಬಳ್ಳಿ ಆನಂದ ನಗರ ನಿವಾಸಿ ಪ್ರವೀಣ್ ಮೂಳೆ (23) ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಮ್ಸ್ ಆಸ್ಪತ್ರೆಯ ವೈದ್ಯರ ಈ ಮಾಹಾ ಯಡವಟ್ಟಿಗೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.