ಕುಸ್ತಿಪಟು ಸಂತೋಷ ನಿಧನ: 5 ಲಕ್ಷ ರು ಪರಿಹಾರ ಘೋಷಣೆ
ಧಾರವಾಡದಲ್ಲಿ ಕಳೆದ ವಾರ ನಡೆದ ರಾಜ್ಯ ಒಲಿಂಪಿಕ್ಸ್ನ ಕುಸ್ತಿಯಲ್ಲಿ ತೊಡೆಯ ಎಲುಬು ಮುರಿತಕ್ಕೆ ಒಳಗಾಗಿದ್ದ ಪೈಲ್ವಾನ್ ಸಂತೋಷ ಹೊಸಮನಿ (21)ಮಂಗಳವಾರ ನಿಧನರಾಗಿದ್ದಾರೆ.
ಹುಬ್ಬಳ್ಳಿ, ಫೆಬ್ರವರಿ. 14 : ಧಾರವಾಡದಲ್ಲಿ ಕಳೆದ ವಾರ ನಡೆದ ರಾಜ್ಯ ಒಲಿಂಪಿಕ್ಸ್ ನ ಕುಸ್ತಿಯಲ್ಲಿ ತೊಡೆ ಎಲುಬು ಮುರಿತಕ್ಕೆ ಒಳಗಾಗಿದ್ದ ಪೈಲ್ವಾನ್ ಸಂತೋಷ ಹೊಸಮನಿ (21) ಮಂಗಳವಾರ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಫೆಬ್ರುವರಿ 8ರಂದು ರಾಜ್ಯ ಒಲಿಂಪಿಕ್ಸ್ ನ 97 ಕೆಜಿ ವಿಭಾಗದ ಗ್ರೀಕೊ ರೋಮನ್ ಕುಸ್ತಿ ಸ್ಪರ್ಧೆಯಲ್ಲಿ ದಾವಣಗೆರೆಯ ಮಹಮ್ಮದ್ ಅಲಿ ವಿರುದ್ಧ ಸೆಣಸುತ್ತಿದ್ದಾಗ ಅವರ ತೊಡೆಯ ಎಲುಬು ಮುರಿದಿತ್ತು.
ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅಂದೇ ರಾತ್ರಿ ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದರು.
'ಮುರಿತಕ್ಕೆ ಒಳಗಾದ ಎಲುಬಿನಿಂದ ಕೊಬ್ಬಿನ ಅಂಶ ರಕ್ತದಲ್ಲಿ ಸೇರಿಕೊಂಡು ಹೃದಯಕ್ಕೆ ರಕ್ತ ಪೂರೈಕೆಯಾಗದೆ ಸಾವು ಸಂಭವಿಸಿದೆ' ಎಂದು ಜಿಲ್ಲಾ ಸರ್ಜನ್ ಗಿರಿಧರ ಕುಕನೂರ ತಿಳಿಸಿದರು.
ಪರಿಹಾರ ಘೋಷಣೆ: ಮೃತ ಕುಸ್ತಿಪಟು ಸಂತೋಷ ಹೊಸಮನಿ ಅವರ ಕುಟುಂಬಕ್ಕೆ ರಾಜ್ಯ ಸರಕಾರ 5 ಲಕ್ಷ ರು ಪರಿಹಾರ ಘೋಷಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಸಂಬಂಧಿಕರ ಪ್ರತಿಭಟನೆ: ಸಂತೋಷನಿಗೆ ತೊಡೆ ಎಲುಬು ಮುರಿದಿದ್ದ ಹೃದಾಯಘಾತದಿಂದ ಸಾವನ್ನಪ್ಪಲು ಹೇಗೆ ಸಾಧ್ಯ ಸರಿಯಾಗಿ ಚಿಕಿತ್ಸೆ ನೀಡಿಲ್ಲದ ಕಾರಣ ಮೃತಪಟ್ಟಿದ್ದಾನೆಂದು ಮೃತ ಸಂತೋಷ ಅವರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.