ಮುಖ್ಯಮಂತ್ರಿ ಸ್ಥಾನ ಬೇಕಿರಲಿಲ್ಲ, ಅನರ್ಹ ಶಾಸಕರನ್ನು ನಂಬಿಸಿ ತಪ್ಪು ಮಾಡಿದೆ: ಯಡಿಯೂರಪ್ಪ
ಹುಬ್ಬಳ್ಳಿ, ನವೆಂಬರ್ 2: ನನಗೆ ಮುಖ್ಯಮಂತ್ರಿ ಸ್ಥಾನ ಬೇಕಾಗಿರಲಿಲ್ಲ, ಅನರ್ಹ ಶಾಸಕರನ್ನು ನಂಬಿಸಿ ತಪ್ಪು ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೇಸರದ ನುಡಿಗಳನ್ನಾಡಿದ್ದಾರೆ.
ಬಿಜೆಪಿ ಸರ್ಕಾರದ ನೂರು ದಿನದ ಸಾಧನೆ ಶೂನ್ಯ: ಸಿದ್ದರಾಮಯ್ಯ
ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಅವರು, ನೀವು ಮಾತನಾಡಿದ ಧಾಟಿ ನೋಡಿದರೆ ಸರ್ಕಾರ ಉಳಿಸುವಂತೆ ಕಾಣಿಸುತ್ತಿಲ್ಲ. ಅನರ್ಹ ಶಾಸಕರನ್ನು ನಂಬಿಸಿ ತಪ್ಪು ಮಾಡಿದೆ ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.
ನಮ್ಮನ್ನು ಆಡಳಿತಕ್ಕೆ ತಂದಿದ್ದು ಅನರ್ಹ ಶಾಸಕರು
ವಿರೋಧ ಪಕ್ಷದಲ್ಲಿದ್ದ ನಮ್ಮನ್ನು ಆಡಳಿತಕ್ಕೆ ತಂದಿದ್ದು ಅನರ್ಹ ಶಾಸಕರು.ಅವರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಬೇಕು ಎಂದು ಪಕ್ಷದ ಮುಖಂಡರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತರಾಟೆ ತೆಗೆದುಕೊಂಡಿದ್ದಾರೆ.
ನಾನೇ ಅಪರಾಧ ಮಾಡಿದ್ದೇನೆ
ನಾನೇ ಅಪರಾಧ ಮಾಡಿದ್ದೇನೆ. ಅವರನ್ನು (17 ಶಾಸಕರು) ನಂಬಿಸಿ, ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತು ಅಪರಾಧ ಮಾಡಿದ್ದೇನೆ. ಉಪಚುನಾವಣೆಯಲ್ಲಿ ಸೋಲೊ, ಗೆಲುವೊ ಬೇರೆ ಪ್ರಶ್ನೆ. ಆದರೆ, ಯಾರೊಬ್ಬರ ಬಾಯಲ್ಲೂ ಅವರೆಲ್ಲ (ಅನರ್ಹ ಶಾಸಕರು) ತ್ಯಾಗ ಮಾಡಿದ್ದರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಮಾತು ಬರಲಿಲ್ಲ. ಅವರು ಮೂರ್ಖರು, ಹುಚ್ಚರು. ನಮ್ಮನ್ನು ನಂಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ. ಅವರಿಗೆ ಆ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಉಳಿಸುವಂತೆ ಕಾಣುತ್ತಿಲ್ಲ
'ನೀವು ಮಾತನಾಡಿದ ಧಾಟಿ ನೋಡಿದರೆ ಸರ್ಕಾರ ಉಳಿಸುವಂತೆ ಇದೆ ಅಂತ ಅನ್ನಿಸುತ್ತಿಲ್ಲ. 17 ಶಾಸಕರ ರಾಜೀನಾಮೆ ತೀರ್ಮಾನ ನಾನು ತೆಗೆದುಕೊಂಡಿದ್ದಲ್ಲ. ರಾಷ್ಟ್ರೀಯ ಅಧ್ಯಕ್ಷರಿಗೆ ಗೊತ್ತಿದ್ದೇ ಎರಡೂವರೆ ತಿಂಗಳು ಶಾಸಕರನ್ನು ಮುಂಬೈಯಲ್ಲಿ ಇಟ್ಟಿದ್ದು ನಿಮಗೆಲ್ಲ ಗೊತ್ತಿದೆಯಲ್ಲವೆ. ನನಗೇನು ಮುಖ್ಯಮಂತ್ರಿಗಿರಿ ಬೇಕಾಗಿಲ್ಲ.
ಉತ್ತಮ ಕೆಲಸ ಮಾಡಬೇಕು ಅನ್ನೋದು ನನ್ನ ಅಪೇಕ್ಷೆ
3-4 ಬಾರಿ ಸಿ.ಎಂ ಆಗಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಉತ್ತಮ ಕೆಲಸ ಮಾಡಬೇಕು ಎಂಬುದಷ್ಟೇ ನನ್ನ ಅಪೇಕ್ಷೆ ಆಗಿತ್ತು. ದೊಡ್ಡತನ, ಧಾರಾಳತನ ನಿಮಗೆ ಇಲ್ಲವಲ್ಲ. ವಾಸ್ತವಿಕ ಸ್ಥಿತಿಯನ್ನು ತಿಳಿದುಕೊಳ್ಳದೇ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತೀರಿ. ಎರಡು ಕ್ಷೇತ್ರಗಳ (ಅಥಣಿ, ಕಾಗವಾಡ) ಬಗ್ಗೆ ನಿಮ್ಮಿಂದ ಇಂತಹ ಅಭಿಪ್ರಾಯ ನಿರೀಕ್ಷಿಸಿರಲಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿ. ಇಲ್ಲಿ ಹೇಳಿದ ಮಾತು ನಾಲ್ಕು ಗೋಡೆಗಳ ಮಧ್ಯೆ ಇರಲಿ ಎಂದಿದ್ದಾರೆ.