ದೇವಸ್ಥಾನದಲ್ಲಿ ಸೀರೆಗೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವು
ಹುಬ್ಬಳ್ಳಿ, ಜೂನ್ 25 : ದೇವಸ್ಥಾನದಲ್ಲಿ ಪೂಜೆ ಮಾಡುವ ವೇಳೆ ಸೀರೆಗೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಛಾಯಾ ನಾಗರಾಜ್ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಹುಬ್ಬಳ್ಳಿಯ ವಿಶ್ವನಾಥ ಮಂದಿರಕ್ಕೆ ಜೂನ್ 17ರಂದು ಪೂಜೆಗೆಂದು ತೆರಳಿದ್ದ ಛಾಯಾ ಕೊನೆಗೂ ಮನೆಗೆ ಮತ್ತೆ ಮರಳಲೇ ಇಲ್ಲ.
ಅಂದು ಪೂಜೆ ಮುಗಿದ ಬಳಿಕ ಅಲ್ಲೇ ಇದ್ದ ದೀಪ ಸೀರೆಗೆ ತಾಗಿ ಬೆಂಕಿ ಆವರಿಸಿಕೊಂಡಿತ್ತು. ಕೆಲವೇ ಕ್ಷಣಗಳಲ್ಲಿ ಇಡೀ ಸೀರೆಯೊಂದಿಗೆ ದೇಹವೇ ಸುಟ್ಟು ಹೋಗಿತ್ತು. ತಕ್ಷಣ ಉರಿ ತಾಳಲಾರದೆ ದೇವಸ್ಥಾನದ ಒಳಗೆ ಪ್ರವೇಶಿಸಿದ್ದರು.
ಕೊನೆಗೆ ಅಲ್ಲಿದ್ದ ಕೆಲವು ಮಂದಿ ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು. ಆದರೂ ಇಡೀ ದೇಹವೇ ಸುಟ್ಟು ಹೋಗಿತ್ತು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ದೇವರಿಗೆ ವಂದಿಸಿ ಮಹಿಳೆ ಮರಳುತ್ತಿರುವಾಗ ಸೀರೆಗೆ ಬೆಂಕಿ ತಗುಲಿರುವುದು ಗಮನಕ್ಕೆ ಬಂದಿದೆ. ಆದರೆ, ರೇಷ್ಮೆ ಸೀರೆಯಾಗಿದ್ದರಿಂದ ಬೆಂಕಿ ವೇಗವಾಗಿ ಆವರಿಸಿಕೊಂಡಿದೆ.
ಬೆಂಕಿ ತಗುಲುತ್ತಿದ್ದಂತೆ ಜೋರಾಗಿ ಕೂಗಿದೆ ಮಹಿಳೆ ಅಲ್ಲಿಯೇ ಪಕ್ಕದಲ್ಲಿದ್ದ ಕೋಣೆಗೆ ತೆರಳಿ ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾರೆ. ನೆರೆಹೊರೆಯವರು ಕೂಡಾ ನೀರು ತಂದು ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾರೆ.
ಸುದೀರ್ಘ ಹೋರಾಟದ ನಂತರ ಮಹಿಳೆಯ ಸೀರೆಗೆ ತಗುಲಿದ್ದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಹಿಳೆಯ ಸೀರೆಗೆ ಹತ್ತಿದ ಬೆಂಕಿ ದೇಹದ ತುಂಬಾ ವ್ಯಾಪಿಸಿದ್ದರಿಂದ ಗಂಭೀರ ಪರಿಸ್ಥಿತಿಯಲ್ಲಿದ್ದರು. ಕೂಡಲೇ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ವಾರಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಜೀವಬಿಟ್ಟಿದ್ದಾರೆ.
ಅವರ ಸೀರೆಗೆ ಬೆಂಕಿ ಹತ್ತಿಕೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿ ಮಾಡಿತ್ತು.