ಸಂಸದರಿಗೆ ಪಾದರಕ್ಷೆ ತೋರಿಸಿ ಎಸೆಯುತ್ತೇವೆ : ಅಗ್ನಿ ಶ್ರೀಧರ್
ಹುಬ್ಬಳ್ಳಿ, ಆಗಸ್ಟ್,31: ಕಳಸಾ ಬಂಡೂರಿ ವಿಷಯದಲ್ಲಿ ತಾರತಮ್ಯ ಮಾಡುತ್ತಿರುವ ಸಂಸದರಿಗೆ ಪಾದರಕ್ಷೆ ತೋರಿಸಿ, ಅವರ ಮೇಲೆ ಒಗೆಯುತ್ತೇವೆ ಎಂದು ಕರುನಾಡು ಸೇನೆಯ ಅಧ್ಯಕ್ಷ ಅಗ್ನಿ ಶ್ರೀಧರ್ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋರ್ಟ್ ಗಳಲ್ಲಿ ಎಲ್ಲ ರೀತಿಯ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನ್ಯಾಯಾಲಯದಲ್ಲಿ ಕಳಸಾ- ಬಂಡೂರಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಲು ಆಗುವುದಿಲ್ಲ. ಆದಷ್ಟು ಬೇಗ ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುತ್ತೇವೆ ಎಂದರು.[ಸೆ.10ರಂದು ರಾಜ್ಯದಲ್ಲಿ ರೈಲು ಸಂಚಾರ ಬಂದ್]
ಬಿಜೆಪಿ ಹತ್ತಿರ ಕಳಸಾ- ಬಂಡೂರಿಯ ಸಮಸ್ಯೆಗೆ ಪರಿಹಾರವಿದ್ದು, ಅವರ ಮೇಲೆ ಒತ್ತಡ ಹೇರಲು ಸೋನಿಯಾ ಗಾಂಧಿಯವರಿಗೆ ಮನವರಿಕೆ ಮಾಡಿಕೊಡಲಾಗುವುದು. ನರೇಂದ್ರ ಮೋದಿ ಕೇವಲ ದೇಶಕ್ಕಷ್ಟೇ ಎಲ್ಲ ರಾಜ್ಯಗಳಿಗೂ ಪ್ರಧಾನಿ ಮಂತ್ರಿ. ಅವರೇ ಮುಂದು ನಿಂತು ಕಳಸಾ-ಬಂಡೂರಿ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಎಂದರು.
ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ ಅವರೊಂದಿಗೆ ನಾವು ಮಾತನಾಡಿದ್ದೇವೆ. ಅವರು ರಾಜ್ಯದ ಮುಖಂಡರ ಜತೆ ಮಾತನಾಡಲು ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ ರಾಜ್ಯದ ಸಂಸದರು ಪರ್ಸೇಕರ ಅವರನ್ನು ಭೇಟಿಯಾಗಲು ಹೋದಾಗ ನಮ್ಮೊಂದಿಗೆ ಮಾತನಾಡದಂತೆ ಪರ್ಸೇಕರ ಅವರಿಗೆ ಒತ್ತಡ ಹಾಕಿದ್ದರು ಎಂದು ಹೇಳಿದರು.[ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮನವಿ]
ಅಲ್ಲಿನ ನೀರಾವರಿ ಸಚಿವರೊಂದಿಗೂ ಮಾತುಕತೆ ಮಾಡಿದ್ದೇವೆ, ಅವರೂ ನ್ಯಾಯಾಧಿಕರಣದ ತೀರ್ಪು ಯಾವ ರೀತಿಯಲ್ಲಿ ಬಂದರೂ 6 ತಿಂಗಳಲ್ಲಿ ಚುನಾವಣೆಯಿದ್ದು, ಆ ನಂತರ ಸಮಸ್ಯೆ ಬಗೆಹರಿಸೋಣ ಎಂದು ಭರವಸೆ ನೀಡಿದ್ದಾರೆ ಎಂದರು.