ಶಿವರಾಂ ಹೆಬ್ಬಾರ್ ಗೆ ಓಕೆ, ಆದರೆ ಮಗನಿಗೆ ಟಿಕೆಟ್ ಯಾಕೆ? ಎಂದ ವಿ.ಎಸ್.ಪಾಟೀಲ
ಹುಬ್ಬಳ್ಳಿ, ಅಕ್ಟೋಬರ್ 14: "ನಾನು ಯಲ್ಲಾಪುರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಆದರೆ ಪಕ್ಷದ ಹೈಕಮಾಂಡ್ ಅನರ್ಹ ಶಾಸಕ ಶಿವರಾಂ ಹೆಬ್ಬಾರ್ ಅವರಿಗೆ ಟಿಕೆಟ್ ನೀಡಿದರೆ ನಾನು ತ್ಯಾಗ ಮಾಡುವೆ. ಅದು ಬಿಟ್ಟು ಹೆಬ್ಬಾರ ಪುತ್ರನಿಗೆ ಟಿಕೆಟ್ ನೀಡುವುದಾದರೆ ನನಗೆ ಟಿಕೆಟ್ ನೀಡಬೇಕು" ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದ್ದಾರೆ.
'ಬಸ್' ಹತ್ತಿದ ವಿ.ಎಸ್.ಪಾಟೀಲ; ಶಿವರಾಮ ಹೆಬ್ಬಾರ್ ಹಾದಿ ಇನ್ನು ಸುಗಮ
ಹುಬ್ಬಳ್ಳಿಯಲ್ಲಿ ಇಂದು ವಾಯುವ್ಯ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ವಿ.ಎಸ್.ಪಾಟೀಲ ಅವರು, "ಶಿವರಾಂ ಹೆಬ್ಬಾರ್ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ನನ್ನ ಒಪ್ಪಿಗೆಯಿದೆ. ಆದರೆ ಅವರ ಪುತ್ರನಿಗೆ ಟಿಕೆಟ್ ಕೊಟ್ಟರೇ ನನಗೂ ಟಿಕೇಟ್ ಬೇಕು ಎಂದು ಪಟ್ಟು ಹಿಡಿಯುವೆ" ಎಂದಿದ್ದಾರೆ.
ಶಿವರಾಂ ಹೆಬ್ಬಾರ್ ಬಿಜೆಪಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲೆ ವಿ.ಎಸ್. ಪಾಟೀಲ್ ಗೆ ಸಿಎಂ ಬಿಎಸ್ ವೈ ವಾಯುವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಸ್ಥಾನ ನೀಡಿ ಅಸಮಾಧಾನ ಶಮನಕ್ಕೆ ಮುಂದಾಗಿದ್ದಾರೆ. ಆದರೆ ಪಾಟೀಲ ಅವರು ಶಿವರಾಂ ಹೆಬ್ಬಾರ್ ಪುತ್ರನಿಗೆ ಟಿಕೇಟ್ ನೀಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಗೆ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಆಗುವ ಸೂಚನೆ ಇದರಿಂದ ದೊರೆತಿದೆ.