ನಾಳೆ ಹುಬ್ಬಳ್ಳಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಹುಬ್ಬಳ್ಳಿ, ಫೆಬ್ರುವರಿ 01: ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ನಾಳೆ ಫೆ.2ರಂದು ಹುಬ್ಬಳ್ಳಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ರೈಲ್ವೆ ಮೈದಾನದಲ್ಲಿ ನಡೆಯುತ್ತಿರುವ ಯೋಗ ಶಿಬಿರದಲ್ಲಿ ಬೆಳಿಗ್ಗೆ 7 ಗಂಟೆಗೆ ಭಾಗವಹಿಸಿ, ಯೋಗ ಗುರು ಬಾಬಾ ರಾಮದೇವ ಅವರೊಂದಿಗೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬೆಳಿಗ್ಗೆ 7.35ಕ್ಕೆ ಸರ್ಕ್ಯೂಟ್ ಹೌಸ್ ತಲುಪುವ ಅವರು, ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ರೈತ ಸೇನೆಯ ನಿಯೋಗವನ್ನು ಭೇಟಿ ಮಾಡುವರು. 10.50ಕ್ಕೆ ದೇಶಪಾಂಡೆ ಕೌಶಲ್ಯ ಅಭಿವೃದ್ಧಿ ಕೇಂದ್ರ ತಲುಪುವರು. ನಂತರ ದೇಶಪಾಂಡೆ ಫೌಂಡೇಶನ್ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ ಹೊಸೂರ, ಬಿಆರ್ ಟಿಎಸ್ ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣ ಉದ್ಘಾಟಿಸಲಿದ್ದಾರೆ. ನಂತರ ಚಿಗರಿ ಬಸ್ ಗಳಿಗೆ ಹಸಿರು ನಿಶಾನೆ ತೋರುವರು.
ನಂತರ ನವನಗರ ನಿಲ್ದಾಣಕ್ಕೆ ತೆರಳಿ ಮಧ್ಯಾಹ್ನ 3ರಿಂದ 4ರವರೆಗೆ ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣದ ಬಳಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ ವಿಶೇಷ ವಿಮಾನದ ಮೂಲಕ ದೆಹಲಿಗೆ ಮರು ಪ್ರಯಾಣ ಬೆಳೆಸುವರು ಎಂದು ತಿಳಿದುಬಂದಿದೆ.