ವೀರಶೈವ ಮಠಾಧೀಶರ ಕೆಂಗಣ್ಣಿಗೆ ಗುರಿಯಾದ ಶಾಮನೂರು
ಹುಬ್ಬಳ್ಳಿ, ಜುಲೈ 26 : ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ವಿವಾದ ಇಷ್ಟೊಂದು ದೊಡ್ಡದಾಗಿ ಬೆಳೆಯುವವರೆಗೂ ಮೌನವಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಈಗ ವೀರಶೈವ ಮಠಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಶಾಸಕರೂ ಆಗಿರುವ ಶಾಮನೂರ ಅವರಿಗೆ ಇತ್ತ ಸಮುದಾಯದ ಮುಖಂಡರು ಕೊಟ್ಟಿರುವ ಅಧಿಕಾರ ಅತ್ತ ಲಿಂಗಾಯತ ಧರ್ಮದ ಪರವಾಗಿ ನಿಂತಿರುವ ಕಾಂಗ್ರೆಸ್ ನಿಲುವುಗಳು ಅಡಕತ್ತರಿಗೆ ಸಿಲುಕಿಸಿವೆ.
ಈ ಕಾರಣದಿಂದ ಕಾಂಗ್ರೆಸ್ನ ಲಿಂಗಾಯತ ಪ್ರತ್ಯೇಕ ಧರ್ಮದ ನಿಲುವಿಗೆ ಶಾಮನೂರು ಮೃದು ಧೋರಣೆ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರ ವಿರುದ್ಧ ವೀರಶೈವ ಮಠಾಧೀಶರು ಒಳಗೊಳಗೆ ಕುದಿಯುತ್ತಿದ್ದಾರೆ.
ಅಲ್ಲದೆ ಶಾಮನೂರು ಅವರು ಆಯೋಜಿಸಿರುವ ಸಭೆಗೂ ಮುನ್ನ ಪ್ರತ್ಯೇಕ ಸಭೆ ನಡೆಸಲೂ ಕೆಲ ಸ್ವಾಮೀಜಿಗಳು ನಿರ್ಧರಿಸಿದ್ದು, ಇದಕ್ಕಾಗಿ ಸ್ವಾಮೀಜಿಗಳ ಪ್ರತ್ಯೇಕ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಇಂದಿನ ಸ್ಥಿತಿಗೆ ವೀರಶೈವರಲ್ಲಿನ ಅವಿವೇಕವೇ ಕಾರಣ: ಚಿದಾನಂದ ಮೂರ್ತಿ
ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ಅಭ್ಯಾಸ ಮಾಡಿ ವಿವಿಧ ಮಠಗಳಿಗೆ ಮಠಾಧೀಶರಾಗಿರುವ ಹಾನಗಲ್ ಗುರುಕುಮಾರ ಶಿವಯೋಗಿಗಳ ಶಿಷ್ಯರು ಪ್ರಸ್ತುತ ಬೆಳವಣಿಗೆಗಳ ಕುರಿತು ಅಸಮದಾನಗೊಂಡಿದ್ದು, ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯಲು ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್ ಹಾಗೂ ಸಚಿವರ ಹೇಳಿಕೆಗಳಿಗೆ ಶಾಮನೂರ ಶಿವಶಂಕರಪ್ಪ ಮೃದು ಧೋರಣೆ ಹೊಂದಿದ್ದಾರೆ.
ಈ ಧೋರಣೆ ಹೀಗೆ ಮುಂದುವರಿದರೆ ಸಮುದಾಯ ಒಡೆದು ರಾಜಕೀಯ ಪಕ್ಷಗಳ ಅಡಿಯಾಳಾಗುವುದರಲ್ಲಿ ಎರಡು ಮಾತಿಲ್ಲ ಎಂಬುದು ಈ ಸ್ವಾಮೀಜಿಗಳು ಆತಂಕ ವ್ಯಕ್ತಪಿಡಿಸಿದ್ದಾರೆ
ಹೆಚ್ಚುತ್ತಿರುವ ಬೇಗುದಿ: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಕೂಗಿಗೆ ಬೆಂಕಿ ಇಟ್ಟಿರುವ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಉತ್ತರ ಕರ್ನಾಟಕದಲ್ಲಿ ಒಳಗೊಳಗೆ ಬೇಗುದಿ ಹೆಚ್ಚುತ್ತಿದೆ. ಪ್ರತ್ಯೇಕ ಧರ್ಮದ ಕೂಗು ಕಾಂಗ್ರೆಸ್ನ ರಾಜಕೀಯ ದಾಳವಲ್ಲದೆ ಬೇರೆನೂ ಅಲ್ಲ ಎಂಬ ಸತ್ಯ ದಿನ ಕಳೆದಂತೆ ಜನರಿಗೆ ಅರ್ಥವಾಗತೊಡಗಿದೆ.
ಬಿಜೆಪಿ ಟ್ರಂಪ್ ಕಾರ್ಡ್ ಆಗಿರುವ ಲಿಂಗಾಯತರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಮೂಲಕ ಬಿಜೆಪಿ ಮತ ಬ್ಯಾಂಕಿಗೆ ಕನ್ನ ಹಾಕುವ ಅವರ ಲೆಕ್ಕಾಚಾರಕ್ಕೆ ಈ ಬೇಗುದಿ ಹಿನ್ನೆಡೆಯುನ್ನುಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ವೀರಶೈವ ಮಹಾಸಭಾದ ವತಿಯಿಂದ ತಾಲೂಕು ಕೇಂದ್ರಗಳಲ್ಲಿ ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆಗಳೂ ಆರಂಭವಾಗಿವೆ.