ಹುಬ್ಬಳ್ಳಿ: ಮಾತೆ ಮಹಾದೇವಿ ವಿರುದ್ಧ ಮುಂದುವರೆದ ಪ್ರತಿಭಟನೆ
ಹುಬ್ಬಳ್ಳಿ, ಆಗಸ್ಸ್ 01 : ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಒತ್ತಾಯ ಮಾಡುತ್ತಿರುವ ಮಾತೆ ಮಹಾದೇವಿ ಹಾಗೂ ಅವರ ಬೆಂಬಲಿಗರು ಪಂಚಪೀಠಗಳ ಪರಂಪರೆಯನ್ನು ಅವಹೇಳನ ಮಾಡುತ್ತಿದ್ದಾರೆಂದು ಆರೋಪಿಸಿ ವಿವಿಧ ಮಠಾಧೀಶರು, ವೀರಶೈವ ಮುಖಂಡರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಮಾತೆ ಮಹಾದೇವಿ ವಿರುದ್ಧ ಹುಬ್ಬಳ್ಳಿ ವೀರಶೈವ ಯುವ ವೇದಿಕೆ ಪ್ರತಿಭಟನೆ
ನಗರದ ಯಲ್ಲಾಪುರ ಓಣಿಯ ಶ್ರೀಶೈಲ ಮಠದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಶಿಂಪಿಗಲ್ಲಿ, ಜವಳಿಸಾಲ, ದುರ್ಗದಬೈಲ್, ಬ್ರಾಡವೇ, ಮ್ಯಾದಾರ ಓಣಿ, ದಾಜೀಬಾನಪೇಟೆ, ಕೆಸಿ ಸರ್ಕಲ್, ಮಿನಿ ವಿಧಾನಸೌಧ ತಲುಪಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಪ್ರತಿಭಟನಾಕಾರರು ಮಾತೆ ಮಹಾದೇವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾತೆ ಮಹಾದೇವಿ ಅವರು ವೀರಶೈವ ಹಾಗೂ ಅವರ ಆಚರಣೆ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಬಸವಣ್ಣನ ವಚನಗಳನ್ನು ಕೃತಿಚೌರ್ಯ ಮಾಡಿ ಸಮುದಾಯದಿಂದ ತಿರಸ್ಕೃತಗೊಂಡಿದ್ದ ಇವರು ಸನಾತನ ವೀರಶೈವ ಧರ್ಮವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಮುಖ್ಯವಾಗಿ ಮಾತೆ ಮಹಾದೇವಿಗೆ ಸ್ವಾಮಿಯಾಗುವ ಅರ್ಹತೆಯೇ ಇಲ್ಲ. ಇದನ್ನೇ ಹೇಳಿದ ಪಂಚಪೀಠಾಧೀಶ್ವರರ ವಿರುದ್ಧ ಮಾತೆ ಮಹಾದೇವಿ ಹಾಗೂ ಅವರ ಬೆಂಬಲಿಗರು ಅವಹೇಳನಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನೆಕಾರರು ಕಿಡಿ ಕಾರಿದರು.