ಕರ್ನಾಟಕದಲ್ಲಿ ಶೀಘ್ರವೇ ಓಡಲಿದೆ; ವಂದೇ ಭಾರತ್ ಎಕ್ಸ್ಪ್ರೆಸ್ ರೈಲು
ಹುಬ್ಬಳ್ಳಿ, ಅಕ್ಟೋಬರ್ 14; ನೈಋತ್ಯ ರೈಲ್ವೆ ಕರ್ನಾಟಕದಲ್ಲಿ 'ವಂದೇ ಭಾರತ್ ಎಕ್ಸ್ಪ್ರೆಸ್ ರೈಲು' ಓಡಿಸಲು ತಯಾರಿ ನಡೆಸಿದೆ. ದೇಶದ ಅತಿ ವೇಗದ ರೈಲು 'ವಂದೇ ಭಾರತ್ ಎಕ್ಸ್ಪ್ರೆಸ್' ಆಗಿದೆ. ಈಗಾಗಲೇ ದೇಶದಲ್ಲಿ ಈ ರೈಲುಗಳು ಸಂಚಾರ ನಡೆಸುತ್ತಿವೆ.
ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ ಕಿಶೋರ್ ಈ ಕುರಿತು ಮಾತನಾಡಿದರು, "ಶೀಘ್ರದಲ್ಲೇ ಹುಬ್ಬಳ್ಳಿ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಲಾಗುತ್ತದೆ" ಎಂದು ಹೇಳಿದರು.
ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ಸಿಹಿಸುದ್ದಿ ಕೊಟ್ಟ ಇಲಾಖೆ
"ಎರಡು ನಗರಗಳ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆರಂಭಿಸಿದೆ ಸಂಚಾರದ ಅವಧಿ ಕಡಿಮೆಯಾಗಲಿದೆ. ಪ್ರಸ್ತುತ 7 ಗಂಟೆ ಇರುವ ಪ್ರಯಾಣದ ಅವಧಿ 5 ಗಂಟೆ 30 ನಿಮಿಷಕ್ಕೆ ಇಳಿಕೆಯಾಗಲಿದೆ" ಎಂದು ತಿಳಿಸಿದರು.
ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ
ಕೇಂದ್ರ ಸಚಿವರಿಗೆ ಮನವಿ; ಧಾರವಾಡದ ಬಿಜೆಪಿ ಸಂಸದ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಭೇಟಿ ಮಾಡಿ ಬೆಂಗಳೂರು-ಧಾರವಾಡ ನಡುವೆ 'ವಂದೇ ಭಾರತ್ ಎಕ್ಸ್ಪ್ರೆಸ್' ರೈಲು ಓಡಿಸುವ ಕುರಿತು ಮನವಿಯನ್ನು ಸಲ್ಲಿಸಿದ್ದಾರೆ.
ಹುಬ್ಬಳ್ಳಿ-ಕಾರಟಗಿ ನಡುವಿನ ರೈಲು ಸಂಚಾರಕ್ಕೆ ದಿನಗಣನೆ
ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚರಿಸಿದರೆ ಹಲವು ಜಲ್ಲೆಗಳಿಗೆ ಅನುಕೂಲವಾಗಲಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ನೈಋತ್ಯ ರೈಲ್ವೆ ವಲಯದ ಕಚೇರಿ ಇದೆ. ಮೆಡಿಕಲ್ ಕಾಲೇಜು, ಐಐಟಿ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಿವೆ. ವ್ಯಾಪಾರ ವಹಿವಾಟಿಗೂ ಅನುಕೂಲವಾಗಲಿದೆ ಎಂದು ಪ್ರಹ್ಲಾದ್ ಜೋಶಿ ಮನವರಿಕೆ ಮಾಡಿಕೊಟ್ಟಿದ್ದಾರೆ.
ಭಾರತೀಯ ರೈಲ್ವೆ ಹೊಸದಾಗಿ 58 'ವಂದೇ ಭಾರತ್ ಎಕ್ಸ್ಪ್ರೆಸ್' ರೈಲುಗಳ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. 2022ರ ಆಗಸ್ಟ್ 23ರೊಳಗೆ ಇನ್ನೂ 75 ಹೊಸ 'ವಂದೇ ಭಾರತ್ ಎಕ್ಸ್ಪ್ರೆಸ್' ರೈಲುಗಳನ್ನು ಓಡಿಸುವ ಗುರಿ ಇಲಾಖೆಯದ್ದಾಗಿದೆ.
2019ರ ಫೆಬ್ರವರಿಯಲ್ಲಿ ದೆಹಲಿ-ವಾರಣಾಸಿ ನಡುವೆ ಮತ್ತು 2019ರ ಅಕ್ಟೋಬರ್ನಲ್ಲಿ ದೆಹಲಿ-ಶ್ರೀ ಮಾತಾ ವೈಷ್ಣೋದೇವಿ ಕಟ್ರಾ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ.
ಭಾರತದಲ್ಲಿ ಶತಾಬ್ದಿ ಅತಿ ವೇಗದ ರೈಲಾಗಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಶತಾಬ್ದಿಗಿಂತ ವೇಗವಾಗಿ ಸಂಚಾರ ನಡೆಸುತ್ತದೆ. ರೈಲಿನ ವಿನ್ಯಾಸವನ್ನು ಬದಲಾವಣೆ ಮಾಡಲಾಗುತ್ತಿದ್ದು, 2022ರಲ್ಲಿ ಹೊಸ ವಿನ್ಯಾಸದ ರೈಲು ಹಳಿಯ ಮೇಲೆ ಬರಲಿದೆ.
ಜೋಡಿ ಹಳಿ ನಿರ್ಮಾಣ; ಹುಬ್ಬಳ್ಳಿ-ಬೆಂಗಳೂರು ನಡುವಿನ ಜೋಡಿ ಹಳಿ ನಿರ್ಮಾಣ ಕಾರ್ಯ ಮುಂದಿನ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಹುಬ್ಬಳ್ಳಿ-ಬಳ್ಳಾರಿ ಜೋಡಿ ಹಳಿ ಕಾಮಗಾರಿ ಈ ವರ್ಷ ಪೂರ್ಣಗೊಳ್ಳಲಿದೆ ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಹೇಳಿದ್ದಾರೆ.
ಗಂಗಾವತಿ-ದರೋಜಿ ರೈಲು ಮಾರ್ಗ; ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ರೈಲ್ವೆ ಸ್ಟೇಷನ್ನಿಂದ ಬಳ್ಳಾರಿ ಜಿಲ್ಲೆಯ ದರೋಜಿ ರೈಲ್ವೆ ಸ್ಟೇಷನ್ ತನಕ ರೈಲ್ವೆ ಲಿಂಕ್ ಲೈನ್ ಕಾಮಗಾರಿ ಆರಂಭಿಸಬೇಕು ಎಂದು ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ ಸಂಸ್ಥೆಯಿಂದ ರೈಲ್ವೆ ಸಚಿವರನ್ನು ಒತ್ತಾಯಿಸಲಾಗಿದೆ.
ಗಂಗಾವತಿ ನಗರದಿಂದ ಕೇವಲ 35 ಕಿ. ಮೀ. ಅಂತರದಲ್ಲಿರುವ ದರೋಜಿ ಗ್ರಾಮಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವುದರಿಂದ ಕರ್ನಾಟಕ ಅನ್ನದ ಪಾತ್ರೆ ಎಂದು ಕರೆಯಲ್ಪಡುವ ಮತ್ತು ನೂರಾರು ರೈಸ್ ಮಿಲ್ ಹೊಂದಿರುವ ಗಂಗಾವತಿ ನಗರದ ವಾಣಿಜ್ಯ ವಹಿವಾಟಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ರೈಲ್ವೆ ಸಚಿವರಿಗೆ ಬರೆದಿರುವ ಪತ್ರದಲ್ಲಿ ನೂತನ ರೈಲು ಮಾರ್ಗ ಬಳ್ಳಾರಿ, ಗುಂತಕಲ್, ಗುಂಟೂರ್ ರೈಲ್ವೆ ಜಂಕ್ಷನ್ಗೆ ನೇರವಾಗಿ ತಲುಪುತ್ತದೆ ಎಂದು ವಿವರಣೆ ನೀಡಲಾಗಿದೆ. ಈ ರೈಲ್ವೆ ಲಿಂಕ್ ಲೈನ್ ಆರಂಭದಿಂದ ಅಕ್ಕಿ ಮತ್ತು ಅದರ ಉಪ ಉತ್ಪನ್ನಗಳನ್ನು ರೈಲ್ವೆ ಮೂಲಕ ಬೇರೆ ಕಡೆ ಸಾಗಿಸಲು ಅನುಕೂಲವಾಗುತ್ತದೆ ಎಂದು ತಿಳಿಸಲಾಗಿದೆ.
Recommended Video