ಹುಬ್ಬಳ್ಳಿಯಲ್ಲಿ ವಿಜಯ ಸಂಕೇಶ್ವರ್ ದಿಢೀರ್ ಪತ್ರಿಕಾ ಗೋಷ್ಠಿ
ಹುಬ್ಬಳ್ಳಿ, ಮಾರ್ಚ್ 13: ಬಿಜೆಪಿಯಿಂದ ರಾಜ್ಯಸಭಾ ಟಿಕೇಟ್ ಆಕಾಂಕ್ಷಿಯಾಗಿದ್ದ ವಿಆರ್ ಎಲ್ ಸಮೂಹ ಸಂಸ್ಥೆಯ ಮುಖ್ಯಸ್ಥ ವಿಜಯ ಸಂಕೇಶ್ವರ್ ಹುಬ್ಬಳ್ಳಿಯಲ್ಲಿಂದು ದಿಢೀರ್ ಪತ್ರಿಕಾ ಗೋಷ್ಠಿ ಕರೆದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
59 ರಾಜ್ಯಸಭಾ ಸೀಟುಗಳಿಗೆ ಮಾ.23 ರಂದು ಮತದಾನ ನಡೆಯಲಿದೆ. ಕರ್ನಾಟಕ ಬಿಜೆಪಿಯಿಂದ ವಿಜಯ ಸಂಕೇಶ್ವರ್ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರಿಂದ ಅವರಿಗೆ ಟಿಕೇಟ್ ಕೈತಪ್ಪಿದೆ. ಕನ್ನಡಿಗರಿಗೇ ಟಿಕೇಟ್ ನೀಡಬಹುದಿತ್ತು ಎಂಬ ಮಾತು ಹಲವೆಡೆಯಿಂದ ಕೇಳಿಬರುತ್ತಿದೆ.
ರಾಜ್ಯಸಭಾ ಚುನಾವಣೆ: ಇಲ್ಲಿದೆ ಅಭ್ಯರ್ಥಿಗಳ ಅಂತಿಮ ಪಟ್ಟಿ
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇತ್ತ ವಿಜಯ ಸಂಕೇಶ್ವರ್ ದಿಢೀರ್ ಪತ್ರಿಕಾ ಗೋಷ್ಠಿ ಕರೆಯುವ ಮೂಲಕ, ಬಿಜೆಪಿಗೆ ಗುಡ್ ಬೈ ಹೇಳುತ್ತಾರಾ ಎಂಬ ಅನುಮಾನವೂ ಎದ್ದಿದೆ. ಕೆಲ ವರ್ಷಗಳ ಹಿಂದೆ ಇವರು ಬಿಜೆಪಿ ತೊರೆದು, ಕನ್ನಡ ನಾಡು ಪಕ್ಷ ಕಟ್ಟಿದ್ದರು. ನಂತರ ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಸೇರಿದ್ದರು. ಕೆಜೆಪಿ ಬಿಜೆಪಿಯೊಂದಿಗೆ ವಿಲೀನವಾದನಂತರ ಮತ್ತೆ ಬಿಜೆಪಿಗೆ ಸೇರಿದ್ದರು. ಇಂದು(ಮಾ.13) ಬೆಳಿಗ್ಗೆ 11:30 ಕ್ಕೆ ಪತ್ರಿಕಾ ಗೋಷ್ಠಿ ನಡೆಯಲಿದ್ದು, ವಿಜಯ ಸಂಕೇಶ್ವರ್ ಅವರ ನಿರ್ಧಾರವೇನು ಎಂಬುದು ತಿಳಿಯಲಿದೆ.