ತುಮಕೂರು-ದಾವಣಗೆರೆ ರೈಲ್ವೆ ಮಾರ್ಗ ಸಮೀಕ್ಷೆ ಪೂರ್ಣ: ಜೋಶಿ
ಹುಬ್ಬಳ್ಳಿ, ನವೆಂಬರ್, 15 : ಬಹುದಿನಗಳ ಬೇಡಿಕೆಯಾಗಿದ್ದ ತುಮಕೂರು-ಚಿತ್ರದುರ್ಗ ಹಾಗೂ ದಾವಣಗೆರೆ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದೆ. ಸದ್ಯ ಈ ಯೋಜನೆಗೆ ರಾಜ್ಯ ಸರಕಾರ ಭೂಮಿ ಒದಗಿಸಬೇಕಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ತುಮಕೂರು-ಚಿತ್ರದುರ್ಗ ಹಾಗೂ ದಾವಣಗೆರೆ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು. ಈ ಮಾರ್ಗ ಪೂರ್ಣಗೊಂಡಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕೇವಲ ನಾಲ್ಕೂವರೆ ತಾಸುಗಳಲ್ಲಿ ಪ್ರಯಾಣಿಸಬಹುದು ಎಂದರು.
ಸದ್ಯ ಬೀರೂರು, ಚಿಕ್ಕಜಾಜೂರು, ಅರಸೀಕೆರೆ ಮಾರ್ಗವಾಗಿ ಸುತ್ತು ಬಳಸಿ ಬೆಂಗಳೂರಿಗೆ ಪ್ರಯಾಣಿಸಬೇಕಾಗಿದೆ. ಹೊಸ ಮಾರ್ಗದಿಂದ ಸೂಪರ್ ಮತ್ತು ಸೆಮಿ ಸೂಪರ್ ಟ್ರೈನ್ ಗಳನ್ನು ಓಡಿಸಬಹುದು. ಈ ಕಾಮಗಾರಿಗೆ ಕೇಂದ್ರದಿಂದ 1800 ಕೋಟಿ ರೂ. ಅನುದಾನ ದೊರೆತಿದೆ.
ಈಗ ಪ್ರತಿ ಗಂಟೆಗೆ 80 ಕಿ.ಮೀ. ವೇಗದಲ್ಲಿ ರೈಲುಗಳು ಸಂಚರಿಸುತ್ತಿದ್ದ ಹೊಸ ಮಾರ್ಗ ನಿರ್ಮಾಣದಿಂದ ಗಂಟೆಗೆ 120 ರಿಂದ 130 ಕಿ.ಮೀ ವೇಗದಲ್ಲಿ ರೈಲುಗಳನ್ನು ಓಡಿಸಬಹುದಾಗಿದೆ ಎಂದರು. ಇನ್ನು ಹುಬ್ಬಳ್ಳಿ - ಬೆಂಗಳೂರು ನಡುವಿನ ದ್ವಿಮಾರ್ಗ ಯೋಜನೆ 2019 ರೊಳಗಾಗಿ ಪೂರ್ಣಗೊಳಿಸಬೇಕೆಂದರು.
ರೈಲ್ವೆ ಡಿಜಿಎಂ ಎ.ಕೆ.ಗುಪ್ತಾ ಮಾತನಾಡಿ, ಹುಬ್ಬಳ್ಳಿ ಸೇರಿದಂತೆ ಇತರೆ ಕೆಲ ನಿಲ್ದಾಣಗಳನ್ನು 60 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. 9 ಕೋಟಿ ರೂ.ವೆಚ್ಚದಲ್ಲಿ ಬೆಂಗಳೂರು, ಯಶವಂತಪುರ, ಮೈಸೂರಿನಲ್ಲಿ ಎಸ್ಕಲೇಟರ್ ಅಳವಡಿಸಲಾಗಿದ್ದು, ಬೆಳಗಾವಿಯ ರೈಲು ನಿಲ್ದಾಣಗಳಲ್ಲಿ ಆದಷ್ಟು ಬೇಗ ಎಸ್ಕಲೇಟರ್ ಅಳವಡಿಸಲಾಗುವುದು ಎಂದರು.