ರೈಲು ವಿಳಂಬದಿಂದ ತಪ್ಪಿದ ಪರೀಕ್ಷೆ, ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ
ಬೆಂಗಳೂರು, ಆಗಸ್ಟ್ 20: ರೈಲು ವಿಳಂಬದಿಂದ ಹುಬ್ಬಳ್ಳಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸರಿಗೆ ತಪ್ಪಿದ ಪರೀಕ್ಷೆಯನ್ನು ಮತ್ತೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಆದರೆ ಇದಕ್ಕಾಗಿ ರೈಲಿನ ಟಿಕೇಟ್ನೊಂದಿಗೆ ಆ.30ರೊಳಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ ಸಿಎಆರ್, ಡಿಎಆರ್ ಹುದ್ದೆಗೆ ಆ.5ರಂದು ಬೆಂಗಳೂರಲ್ಲಿ ಲಿಖಿತ ಪರೀಕ್ಷೆ ನಿಗದಿಯಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಅಂದು ಕೊಲ್ಲಾಪುರದಿಂದ ಹೊರಟಿದ್ದ ಚೆನ್ನಮ್ಮ ಎಕ್ಸ್ಪ್ರೆಸ್ ರೈಲು ಬೆಳಗ್ಗೆ 6ಕ್ಕೆ ಬೆಂಗಳೂರು ತಲುಪುವ ಬದಲು ಸಂಜೆ 6ಕ್ಕೆ ಬೆಂಗಳೂರು ತಲುಪಿತ್ತು.
ಸಬರ್ಬನ್ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆ
ಈ ಹಿನ್ನೆಲೆಯಲ್ಲಿ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಾಗಿ ಪೊಲೀಸ್ ಇಲಾಖೆ ಭರವಸೆ ನೀಡಿತ್ತು. ಅದರಂತೆ ಇದೀಗ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಪ್ರತ್ಯೇಕ ಅರ್ಜಿ ನಮೂನೆ ಸಿದ್ಧಪಡಿಸಿದೆ.
ಅದರಲ್ಲಿ ಅಭ್ಯರ್ಥಿ ಹೆಸರು, ಈ ಹಿಂದೆ ಸಲ್ಲಿಸಿದ ಅರ್ಜಿಯ ಸಂಖ್ಯೆ, ರೋಲ್ ನಂಬರ್, ಪರೀಕ್ಷಾ ಕೇಂದ್ರ, ಪ್ರಯಾಣದ ದಿನಾಂಕ, ರೈಲ್ವೆ ಟಿಕೆಟ್ನ ಸಂಖ್ಯೆಯನ್ನು ಬರೆದು ಆಗಸ್ಟ್ 30ರೊಳಗಾಗಿ ಕಳುಹಿಸಬೇಕು. ಜತೆಗೆ ಆ.4ರಂದು ಚೆನ್ನಮ್ಮ ಎಕ್ಸ್ಪ್ರೆಸ್ ರೈಲಿನಲ್ಲಿ ಸಂಚರಿಸಿದ ಸಾಕ್ಷಿಯಾಗಿ ಟಿಕೆಟ್ನ ಪ್ರತಿಯನ್ನು ಲಗತ್ತಿಸಿ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ನೇಮಕಾತಿ ಕಚೇರಿ, ಕಾರ್ಲ್ಟನ್ ಭವನ, ಅರಮನೆ ರಸ್ತೆ ಬೆಂಗಳೂರು ಈ ವಿಳಾಸಕ್ಕೆ ಕಳುಹಿಸಬೇಕು.