ಸಿದ್ದರಾಮಯ್ಯ ಏಲ್ಲಿ ಬೇಕಾದ್ರು ಹೋಗಲಿ, ಮೊಟ್ಟೆ ಎಸೆಯಬೇಡಿ: ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ, ಆಗಸ್ಟ್ 19: ಸಾವರ್ಕರ್ ಭಾವಚಿತ್ರ ಮುಸ್ಲಿಂ ಏರಿಯಾದಲ್ಲಿ ಏಕೆ ಹಾಕಬೇಕಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆ ಖಂಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿದ್ದೂ ಕೂಡ ಸರಿಯಲ್ಲ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಜೋಶಿ ಅವರು, ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು. ಸಿದ್ದರಾಮಯ್ಯ ವಿಪಕ್ಷ ನಾಯಕರು. ಅವರು ಏಲ್ಲಿ ಬೇಕಾದರೂ ಹೋಗಬಹುದು. ಅವರ ಮೇಲೆ ಮೊಟ್ಟೆ ಎಸೆಯುವ ಕ್ರಮ ಸರಿಯಲ್ಲ. ಸಿದ್ದರಾಮಯ್ಯ ಅಷ್ಟೇ ಅಲ್ಲ ಯಾವ ಪಕ್ಷದ ನಾಯಕರಿಗೂ ಹೀಗೆ ಮಾಡಬಾರದು ಎಂದು ಜೋಶಿ ಹೇಳಿದರು.
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದದ್ದು ತಪ್ಪು: ಆದರೆ..
ಸಿದ್ದರಾಮಯ್ಯನವರು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕರು, ಎಲ್ಲಿ ಬೇಕಾದರು ಅವರು ಹೋಗಿ ಪರಿಶೀಲನೆ ಮಾಡುವ ಹಕ್ಕು ಅವರಿಗಿದೆ. ಆದರೆ, ವೀರ ಸಾವರ್ಕರ ಬಗ್ಗೆ ಮಾತನಾಡುವ ವೇಳೆ ಯಾರ ಮನಸ್ಸಿಗೂ ನೋವು ಆಗದಂತೆ ಮಾತನಾಡಬೇಕು. ಅದು ಎಲ್ಲರೂ ಮೊದಲು ತಿಳಿದುಕೊಳ್ಳಬೇಕು ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಸಾವರ್ಕರ್ ಬಿಡುಗಡೆಗೆ ಪತ್ರ ಬರೆದಿದ್ದ ಗಾಂಧೀಜಿ
"ಈ ಹಿಂದೆಯೇ ವೀರ ಸಾವರ್ಕರ ಬಗ್ಗೆ ಮಹಾತ್ಮಾ ಗಾಂಧಿಯವರೆ ಮೆಚ್ಚುಗೆ ಮಾತನ್ನು ಆಡಿದ್ದಾರೆ. ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಬ್ರಿಟಿಷರಿಗೆ ಪತ್ರ ಬರೆದಿದ್ದರೂ ಇದು ಅವರಿಗೆ ಗೊತ್ತಿಲ್ಲವೇ. ಇನ್ನು ಭಾರತ ದೇಶದ ಮಾಜಿ ಪ್ರಧಾನಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ದಿವಂಗತ ಇಂದಿರಾಗಾಂಧಿ ಅವರು ಸಹ ವೀರ ಸಾವರ್ಕರ ಭಾರತ ದೇಶ ಗುರುತಿಸಲ್ಪಡುವ ಒಬ್ಬ ವ್ಯಕ್ತಿ ಎಂದು ಹೇಳಿದ್ದರು. ಇಂತವರು ಒರಿಜಿನಲ್ ಕಾಂಗ್ರೆಸ್ ನವರು ವೀರ ಸಾವರ್ಕರ ಬಗ್ಗೆ ತಿಳಿದುಕೊಂಡಿದ್ದರು," ಎಂದರು.
ಸೋನಿಯಾ, ರಾಹುಲ್ ಮೆಚ್ಚಿಸಲು ಟೀಕೆ
ನಾವು ಪದೇ ಪದೇ ಇಂದಿನ ಕಾಂಗ್ರೆಸ್ ನಾಯಕರು ನಕಲಿ ಕಾಂಗ್ರೆಸ್ ನಾಯಕರು ಎಂದು ಹೇಳುವುದು ಅದಕ್ಕೆ. ಸಿದ್ದರಾಮಯ್ಯ ಸೋನಿಯಾ ಹಾಗೂ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಸಾವರ್ಕರ್ ಬಗ್ಗೆ ಟೀಕಿಸುತ್ತಿದ್ದಾರೆ, ಇದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ನಕಲಿ ಕಾಂಗ್ರೆಸ್ಸಿನ ನಕಲಿ ಕಾಂಗ್ರೆಸ್ಸಿಗ ಎಂದರು.
ಒಮ್ಮೊಮ್ಮೆ ಕಾಂಗ್ರೆಸ್ಸನ್ನು ಕಿತ್ತೊಗೆಯಬೇಕು ಎನ್ನತ್ತಾರೆ
ಸಿದ್ದರಾಮಯ್ಯನವರು, ಜನತಾ ಪರಿವಾರದಲ್ಲಿದ್ದಾಗ ಇದೇ ಸೋನಿಯಾ ಗಾಂಧಿಯನ್ನು ಟೀಕಿಸುತ್ತಿದ್ದರು. ಈಗ ವೀರಾವೇಷದ ಭಾಷಣ ಮಾಡುವಾಗ ಒಮ್ಮೊಮ್ಮೆ ಕಾಂಗ್ರೆಸ್ಸನ್ನು ಕಿತ್ತೊಗೆಯಬೇಕು ಎಂದು ಹೇಳುತ್ತಾರೆ. ಈ ಹಿಂದೆ ಈ ಮಾತನ್ನು ಹೇಳಿದ್ದಾರೆ. ಅವರ ಮನಸ್ಥಿತಿ ಇನ್ನು ಬದಲಾಗಿಲ್ಲ. ಏನೇ ಆದರೂ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು, ಅದು ಸಮರ್ಥನಿಯವಲ್ಲ. ಯಾರ ಮೇಲೂ ಮೊಟ್ಟೆ ಎಸೆಯುವದಾಗಲಿ, ಕಪ್ಪು ಪಟ್ಟಿ ಪ್ರದರ್ಶಿಸುವದಾಗಲಿ ಮಾಡಬಾರದು ಇದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಮುಸ್ಲಿಮರ ಒಲೈಕೆ ರಾಜಕಾರಣದಲ್ಲಿ ನಿರತರಾಗಿದ್ದಾರೆ.
ತುಷ್ಠಿಕರಣ ರಾಜಕಾರಣದ ಭಾಗವಾಗಿ ಸಿದ್ದರಾಮಯ್ಯ ಅವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಮುಸ್ಲಿಮರ ಒಲೈಕೆ ರಾಜಕಾರಣದಲ್ಲಿ ನಿರತರಾಗಿದ್ದಾರೆ. ಸಿದ್ದರಾಮಯ್ಯ ಅವರು ಕಾಂಗ್ರೆಸಿಗರಲ್ಲ. ಹೀಗಾಗಿ ಅವರ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಯಾರನ್ನಾದರೂ ಒಲೈಸಿಕೊಳ್ಳಲಿ. ಆದರೆ, ಸಾವರ್ಕರ್ ಬಗ್ಗೆ ಮಾತಾಡುವುದು ಸರಿಯಲ್ಲ. ಅವರೊಬ್ಬ "ರಿಮಾರ್ಕಬಲ್ ಸನ್ ಆಫ್ ಇಂಡಿಯಾ" ಅಂತಾ ಇಂದಿರಾ ಗಾಂಧಿ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಇದನ್ನು ತಿಳಿದುಕೊಳ್ಳಲಿ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
Recommended Video