ಮಹದಾಯಿ ವಿವಾದ: ಫಲ ನೀಡದ ಯಡಿಯೂರಪ್ಪ ಪ್ರಯತ್ನ?
ಹುಬ್ಬಳ್ಳಿ, ಡಿಸೆಂಬರ್ 21: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಮಹದಾಯಿ ವಿವಾದ ಬಗೆಹರಿಸಲು ಮಾಡಿದ ಪ್ರಯತ್ನಕ್ಕೆ ಕೊಡಲಿ ಪೆಟ್ಟು ಬಿದ್ದಂತಿದೆ. ಗೋವಾ ಮುಖ್ಯಂಮತ್ರಿ ಮನೋಹರ ಪರಿಕ್ಕರ್ ಅವರು ' ಮಹದಾಯಿ ವಿಚಾರದಲ್ಲಿ ನಮ್ಮ ನಿರ್ಣಯದಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದಿರುವುದು ಈ ರೀತಿಯ ಅನುಮಾನ ಮೂಡಲು ಕಾರಣ.
ಯಡಿಯೂರಪ್ಪ ಹಾಗೂ ಇನ್ನೂ ಕೆಲವು ರಾಜ್ಯದ ಬಿಜೆಪಿ ಮುಖಂಡರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಧ್ಯಸ್ಥಿಕೆಯಲ್ಲಿ ಗೋವಾ ಮೂಖ್ಯಮಂತ್ರಿ ಮನೋಹರ ಪರಿಕ್ಕರ್ ಅವರನ್ನು ನಿನ್ನೆ ಭೇಟಿ ಆಗಿ ಮಹದಾಯಿ ಕುರಿತು ಮಾತುಕತೆ ನಡೆಸಿ ಮಹದಾಯಿ ವಿವಾದದ ಬಗ್ಗೆ ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯ ಮಹಾ ಸಮಾವೇಶದಲ್ಲಿ ಸಿಹಿ ಸುದ್ದಿ ಘೋಷಿಸುವುದಾಗಿ ಹೇಳಿದ್ದರು.
ಆದರೆ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಕನ್ನಡಿಗರ ಮಹದಾಯಿ ಆಸೆಯ ಬಲೂನಿಗೆ ಸೂಜಿ ಚುಚ್ಚಿದ್ದು, '2002ರಲ್ಲಿ ನಮ್ಮ ರಾಜ್ಯ ಮಹದಾಯಿ ವಿಚಾರವಾಗಿ ತೆಗೆದುಕೊಂಡ ನಿರ್ಣಯಕ್ಕೆ ಬದ್ಧವಾಗಿದ್ದು ಆ ನಿರ್ಣಯದಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಹೇಳಿದ್ದಾರೆ.
'ತರುಣ್ ಭಾರತಿ' ಎಂಬ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮನೋಹರ ಪರಿಕ್ಕರ್ ಅವರು ಈ ವಿಷಯ ಸ್ಪಷ್ಟಪಡಿಸಿದ್ದು, ಗೋವಾ ಜನರ ಹಿತಕಾಯಲು ಸದಾ ಬದ್ಧ, ಮಹದಾಯಿ ವಿಚಾರವಾಗಿ ಯಾವುದೇ ನಿರ್ಣಯಗಳನ್ನು ಸಚಿವ ಸಂಪುಟ ಸಭೆಯಲ್ಲೇ ತೆಗೆದುಕೊಳ್ಳಲಾಗುತ್ತದೆ ಎನ್ನುವ ಮೂಲಕ ನಿನ್ನೆ ಯಡಿಯೂರಪ್ಪ ಅವರೊಂದಿಗಿನ ಸಭೆ ಅನೌಪಚಾರಿಕವಷ್ಟೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ನಿನ್ನೆ ಮನೋಹರ ಪರಿಕ್ಕರ್ ಅವರನ್ನು ಭೇಟಿ ಮಾಡಿದ್ದ ಯಡಿಯೂರಪ್ಪ ಅವರು ವ್ಯತಿರಿಕ್ತವಾದ ಹೇಳಿಕೆ ನಿಡಿದ್ದರು. ಮಹದಾಯಿ ವಿವಾದದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ಮನೋಹರ ಪರಿಕ್ಕರ್ ಅವರಿಂದ ಬಂದಿದ್ದು, ಮಾತುಕತೆ ಫಲಪ್ರದವಾಗಿದೆ. ಆ ಬಗ್ಗೆ ಹುಬ್ಬಳ್ಳಿ ಸಮಾವೇಶದಲ್ಲಿ ಘೋಷಣೆ ಮಾಡುತ್ತೇವೆ ಎಂದಿದ್ದರು. ಆದರೆ ಈಗ ಮನೋಹರ ಪರಿಕ್ಕರ್ ಅವರೇ ಉಲ್ಟಾ ಹೊಡೆದಿದ್ದು, ಯಡಿಯೂರಪ್ಪ ಅವರು ಜನರ ಕಣ್ಣೊರೆಸುವ ತಂತ್ರವಾಗಿ ಆ ರೀತಿ ಹೇಳಿದ್ದರೆ ಎಂಬ ಅನುಮಾನ ಈಗ ಪ್ರಾರಂಭವಾಗಿದೆ.
ಯಡಿಯೂರಪ್ಪ ಅವರು ಅಮಿತ್ ಶಾ ಅವರೊಂದಿಗೆ ಮನೋಹರ ಪರಿಕ್ಕರ್ ಅವರನ್ನು ಭೇಟಿ ಆದಾಗಿನಿಂದಲೂ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಜನ ಮಹದಾಯಿ ವಿವಾದ ಇತ್ಯರ್ಥವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ನಿನ್ನೆ ಸಂಜೆ ಮಾತುಕತೆ ನಂತರ ಯಡಿಯೂರಪ್ಪ ಅವರು ಹುಬ್ಬಳ್ಳಿ ಸಮಾವೇಶದಲ್ಲಿ ವಿವಾದ ಇತ್ಯರ್ಥದ ಕುರಿತು ಘೋಷಿಸುತ್ತೇವೆ ಎಂದ ಬಳಿಕವಂತೂ ನಿರೀಕ್ಷೆಗಳು ಹೆಚ್ಚಾಗಿತ್ತು ಆದರೆ ಈಗ ಎಲ್ಲರ ನಿರೀಕ್ಷೆಗಳು ಹುಸಿಯಾಗುವಂತಹಾ ಹೇಳಿಕೆ ಮನೋಹರ ಪರಿಕ್ಕರ್ ಅವರಿಂದ ಹೊರಬಿದ್ದಿದೆ.