ಸಾವಿನ ರಸ್ತೆ ಕುಖ್ಯಾತಿಯ ಹುಬ್ಬಳ್ಳಿ-ಧಾರವಾಡ ಬೈಪಸ್ ಅಗಲೀಕರಣ
ಹುಬ್ಬಳ್ಳಿ, ಜನವರಿ 09; ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಡೆಸುವ ಜನರಿಗೆ ಸಿಹಿಸುದ್ದಿ. ಸಾವಿನ ರಸ್ತೆ ಎಂದು ಖ್ಯಾತಿ ಪಡೆದಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಅಗಲೀಕರಣಕ್ಕೆ ಟೆಂಡರ್ ಕರೆಯಲಾಗಿದೆ. 6 ಪಥದ ರಸ್ತೆಯಾಗಿ ಇದನ್ನು ಅಭಿವೃದ್ಧಿಗೊಳಿಸಲಾಗುತ್ತದೆ.
ಕೇಂದ್ರ ಸಚಿವ ಮತ್ತು ಧಾರವಾಡದ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಫೇಸ್ ಬುಕ್ ಪೋಸ್ಟ್ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. 1,200 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳಿಯ ಗಬ್ಬೂರು ರಸ್ತೆಯಿಂದ ಧಾರವಾಡದ ನರೇಂದ್ರ ಕ್ರಾಸ್ ವರೆಗಿನ ಒಟ್ಟು 31.6 ಕಿಮೀ 6 ಪಥದ ಎಕ್ಸ್ಪ್ರೆಸ್ ವೇ ಹಾಗೂ 4 ಪಥದ ಹುಬ್ಬಳ್ಳಿ-ಧಾರವಾಡ ಬೈಪಾಸ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಹೇಳಿದ್ದಾರೆ.
2021ರ ಹಿನ್ನೋಟ; ದೇಶಾದ್ಯಂತ ಸುದ್ದಿಯಾದ ಧಾರವಾಡದ ಅಪಘಾತ
ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು ನಿರ್ಮಿಸಲು ಇಪಿಸಿ ಮಾದರಿಯಲ್ಲಿ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದ್ದಾರೆ. ಕಾಮಗಾರಿ ಮುಗಿಸಲು 2.5 ವರ್ಷದ ಗುರಿ ನಿಗದಿ ಮಾಡಲಾಗಿದೆ.
ಈ ಕಾಮಗಾರಿ ಮುಗಿದರೆ ಮೈಸೂರು-ಬೆಂಗಳೂರು ಪ್ರಯಾಣ 90 ನಿಮಿಷ!
ರಸ್ತೆ ನಿರ್ಮಾಣದ ನಂತರ 5 ವರ್ಷದ ನಿರ್ವಹಣೆಯನ್ನೂ ಗುತ್ತಿಗೆದಾರರೇ ನಿರ್ವಹಿಸುವ ಕುರಿತು ಒಪ್ಪಂದ ಮಾಡಿಕೊಳ್ಳುವಂತೆ ಟೆಂಡರ್ನಲ್ಲಿ ಸೂಚಿಸಲಾಗಿದೆ. ಬೈಪಾಸ್ನಲ್ಲಿರುವ ಎಲ್ಲಾ ಟೋಲ್ ತೆಗೆದು ಕೇವಲ ಒಂದು ಟೋಲ್ ಪ್ಲಾಜಾ ಮಾತ್ರ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಮೊಳಕಾಲ್ಮೂರು ರಸ್ತೆ ಅಗಲೀಕರಣ; 30 ಕೋಟಿ ರೂ. ಯೋಜನೆಗೆ ಚಾಲನೆ
ಟೋಲ್ನಿಂದ ವಿನಾಯಿತಿ; ರಸ್ತೆಯಲ್ಲಿ ಟೋಲ್ ಕೆಲಗೇರಿ ಮತ್ತು ನರೆಂದ್ರ ನಡುವೆ ಮಾಡಲಾಗಿದೆ. ಇದರಿಂದ ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಪ್ರಯಾಣಿಕರು ಟೋಲ್ನಿಂದ ವಿನಾಯಿತಿ ಪಡೆಯಲಿದ್ದಾರೆ. ಈ ಬೈಪಾಸ್ ನಿರ್ಮಾಣದಿಂದ ನಗರದೊಳಗೆ ಸಂಚರಿಸುವ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ವಿಸ್ತರಣೆ ಆಗಿರಲಿಲ್ಲ. ಬೆಂಗಳೂರು-ಪುಣೆ ನಡುವೆ 6 ಪಥದ ರಸ್ತೆಯಲ್ಲಿ ವೇಗವಾಗಿ ಬರುವ ವಾಹನ ಚಾಲಕರು ಬೈಪಾಸ್ನಲ್ಲಿಯೂ ಅದೇ ವೇಗದಲ್ಲಿ ಬರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದವು ಎಂಬುದು ತಜ್ಞರ ಅಭಿಪ್ರಾಯವಾಗಿತ್ತು.
ಒಟ್ಟು 1,200 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳಿಯ ಗಬ್ಬೂರು ಎನ್ಹೆಚ್ 4 ರಸ್ತೆಯ 402.6 ಕಿ. ಮೀ. ಯಿಂದ ಧಾರವಾಡದ ನರೇಂದ್ರ ಕ್ರಾಸ್ ಬಳಿ 433.2 ಕಿ. ಮೀ. ವರೆಗಿನ ಒಟ್ಟು 31 ಕಿ. ಮಿ 6 ಪಥದ ಎಕ್ಸ್ಪ್ರೆಸ್ ವೇ ಹಾಗೂ 4 ಪಥದ ರಸ್ತೆ ನಿರ್ಮಾಣಕ್ಕೆ 800 ಕೋಟಿ ರೂ. ಹಾಗೂ ಭೂ ಸ್ವಾಧೀನ ಡಿಪಿಆರ್ ತಯಾರಿಕೆ ಹಾಗೂ ಇನ್ನಿತರೆ ಕಾರ್ಯಕ್ಕೆ 400 ಕೋಟಿ ರೂ. ಕೇಂದ್ರ ಸರ್ಕಾರ ನೀಡಿದೆ.
ಬೈಪಾಸ್ ರಸ್ತೆ ಅಗಲೀಕರಣಕ್ಕೆ ಒಪ್ಪಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಾರಿಗೆ, ಹೆದ್ದಾರಿ ಸಚಿವರ ನಿತಿನ್ ಗಡ್ಕರಿಗೆ ಪ್ರಹ್ಲಾದ್ ಜೋಶಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅವಳಿ ನಗರದ ಬಹುದಿನದ ಬೇಡಿಕೆಗೆ ಕೊನೆಗೂ ಸರ್ಕಾರ ಈ ಮೂಲಕ ಒಪ್ಪಿಗೆ ನೀಡಿದೆ.
ಸಾವಿನ ರಸ್ತೆ ಎಂಬ ಕುಖ್ಯಾತಿ; ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಸಾವಿನ ರಸ್ತೆ ಎಂದು ಕುಖ್ಯಾತಿ ಪಡೆದಿದೆ. 2021ರ ಜನವರಿ 15ರ ಶುಕ್ರವಾರ ರಸ್ತೆಯ ಇಟಿಗಟ್ಟಿ ಬಳಿ ಟೆಂಪೋ ಟ್ರಾವೆಲರ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು.
ದಾವಣಗೆರೆಯಿಂದ ಗೋವಾಕ್ಕೆ ಪ್ರವಾಸ ಹೊರಟಿದ್ದ 11 ಜನರು ಈ ಅಪಘಾತದಲ್ಲಿ ಮೃತಪಟ್ಟರು. ಮೃತಪಟ್ಟವರಲ್ಲಿ ಮಹಿಳೆಯರೇ ಹೆಚ್ಚು, ಎಲ್ಲರೂ ಸ್ನೇಹಿತರಾಗಿದ್ದು, ಸಂಕ್ರಾಂತಿ ರಜೆ ಹಿನ್ನಲೆಯಲ್ಲಿ ಗೋವಾ ಪ್ರವಾಸ ಕೈಗೊಂಡಿದ್ದರು. ಈ ಅಪಘಾತ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸಹ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದರು.
ಈ ಅಪಘಾತದ ನಂತರ ಬೈಪಾಸ್ ರಸ್ತೆ ಅಗಲ ಮಾಡಬೇಕು ಎಂದು ಪ್ರತಿಭಟನೆಗಳು ನಡೆದವು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರು ದಾವಣಗೆರೆಯಿಂದ ಧಾರವಾಡಕ್ಕೆ ಬಂದು ಪ್ರತಿಭಟನೆ ನಡೆಸಿದರು. ರಸ್ತೆ ಅಗಲೀಕರಣ ಮಾಡಿ, ಬೈಪಾಸ್ ರಸ್ತೆಯನ್ನು ಚತುಷ್ಪಥ ಮಾಡಿ ಎಂಬ ಬೇಡಿಕೆ ಮುಂದಿಟ್ಟಿದ್ದರು.
ಕಳೆದ 4 ವರ್ಷಗಳ ಅವಧಿಯಲ್ಲಿ 30 ಕಿ. ಮೀ. ಉದ್ದ ಈ ಬೈಪಾಸ್ ರಸ್ತೆಯಲ್ಲಿ ನಡೆದ ಅಪಘಾತಗಳು 528. ಇದರಲ್ಲಿ 89 ಜನರು ಮೃತಪಟ್ಟಿದ್ದಾರೆ, 542 ಜನರು ಗಾಯಗೊಂಡಿದ್ದಾರೆ. ಈಗ ಬೈಪಾಸ್ ರಸ್ತೆ ಅಗಲೀಕರಣಕ್ಕೆ ಟೆಂಡರ್ ಕರೆಯಲಾಗಿದೆ.