ಸಿಡ್ನಿ ಟು ಹುಬ್ಬಳ್ಳಿ ಪ್ರೇಮ್ ಕಹಾನಿ; ಹುಡುಗಿಗಾಗಿ ಹುಬ್ಬಳ್ಳಿಯಲ್ಲಿ ಧರಣಿ ಕುಳಿತಿದ್ದಾನೆ ಈ ಪ್ರೇಮಿ
ಹುಬ್ಬಳ್ಳಿ, ನವೆಂಬರ್ 16: ಆತ ಸಿಡ್ನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್. ಕೈತುಂಬಾ ಸಂಬಳ. ಮದುವೆ ಮಾಡಿಕೊಳ್ಳುವ ಮನಸ್ಸಾಗಿದ್ದರಿಂದ ಆನ್ ಲೈನ್ ಮ್ಯಾಟ್ರಿಮೊನಿಯಲ್ಲಿ ತಡಕಾಡಿದ್ದ. ಆ ವೇಳೆ ಹುಬ್ಬಳ್ಳಿಯ ಈ ಹುಡುಗಿಗೆ ಮನಸೋತಿದ್ದ. ಆ ಹುಡುಗಿಯನ್ನು ಒಲಿಸಿಕೊಂಡು ಸುಖಜೀವನ ನಡೆಸಲು ನೂರಾರು ಕನಸು ಕಟ್ಟಿಕೊಂಡಿದ್ದ, ಆದರೀಗ ಆಗಿದ್ದೇ ಬೇರೆ.
ಸಿಡ್ನಿಯ ಕಾಯಂ ನಿವಾಸಿಯಾಗಿರುವ, ಮೂಲತಃ ಆಂಧ್ರದ ಕಡಪ ಜಿಲ್ಲೆಯವನಾದ ಚಕ್ರವರ್ತಿ ಮ್ಯಾಟರಿಮೊನಿ ಮೂಲಕ ಶ್ವೇತಾ ಎನ್ನುವ ಹುಬ್ಬಳ್ಳಿಯ ಹುಡುಗಿಗೆ ಮನಸೋತಿದ್ದ. ಇಷ್ಟಪಟ್ಟಿದ್ದ ಈ ಹುಡುಗಿಯನ್ನು ಮದುವೆಯಾಗಲು ಸಿಡ್ನಿಯಿಂದ ದೇಶಕ್ಕೆ ಬಂದು ಹುಡುಗಿಯ ಮನೆಯವರೊಂದಿಗೆ ಮಾತುಕತೆ ಸಹ ನಡೆಸಿದ್ದ. ಮೊದ ಮೊದಲಿಗೆ ಹುಡುಗಿಯ ಮನೆಯವರು ಮಾತುಕತೆ ನಡೆಸಿ ಮದುವೆಗೆ ಒಪ್ಪಿದ್ದರು. ಆದರೆ ಆಮೇಲೆ ಜಾತಿ ಕಾರಣಕ್ಕೆ ಮದುವೆಗೆ ನಿರಾಕರಿಸಿದ್ದಾರೆ.
ನೆದರ್ ಲ್ಯಾಂಡ್ ನಿಂದ ಬಂದು ಮೈಸೂರು ಯುವತಿ ವರಿಸಿದ ಯುವಕ
ಇದರಿಂದ ಮನನೊಂದ ಆ ಯುವಕ ಹುಡುಗಿ ಇರುವ ಹುಬ್ಬಳ್ಳಿಯ ವೆಂಕಟೇಶ್ವರ ಕಾಲೋನಿ ನಿವಾಸದ ಎದುರು ನಾನು ಪ್ರೀತಿ ಮಾಡಿದವಳ ಜೊತೆ ನನ್ನ ಮದುವೆ ಆಗಲೇಬೇಕೆಂದು ಹಟ ಹಿಡಿದು ಕುಳಿತಿದ್ದಾನೆ. ನಾಲ್ಕು ದಿನಗಳಿಂದಲೂ ಅಲ್ಲೇ ಕುಳಿತು ಹಗಲಿರುಳು ಧರಣಿ ನಡೆಸುತ್ತಿದ್ದಾನೆ.
ಈ ಪ್ರೇಮಿ ಕಾಟದಿಂದ ಹುಡುಗಿ ಮನೆಯವರೂ ಮನೆಬಿಟ್ಟು ಹೋಗಿದ್ದಾರೆ. ಹುಡುಗಿ ಕೂಡ ಪೊಲೀಸರ ಬಳಿ, ಹುಡುಗನನ್ನು ಮದುವೆ ಮಾಡಿಕೊಳ್ಳಲು ನಿರಾಕರಣೆ ಪತ್ರವನ್ನು ಬರೆದುಕೊಟ್ಟಿದ್ದಾಳೆ. ಹೀಗಾಗಿ ಹುಡುಗಿಯ ಮನೆ ಮುಂದೆ ಧರಣಿ ಕುಳಿತಿರುವ ಸಿಡ್ನಿ ಸಾಫ್ಟ್ ವೇರ್ ಎಂಜಿನಿಯರ್ ಮನವೊಲಿಸಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಆದರೆ ಆತನೂ ಬಗ್ಗುವಂತೆ ಕಾಣುತ್ತಿಲ್ಲ.