ಮಾನವೀಯತೆ ಮೆರೆದ ಹುಬ್ಬಳ್ಳಿಯ ಪಶುವೈದ್ಯರು
ಹುಬ್ಬಳ್ಳಿ, ಏಪ್ರಿಲ್ 12: ಕೊರೊನಾ ವೈರಸ್ ಸೋಂಕಿನ ವಿರುದ್ಧ ವಿಶ್ವದ ಎಲ್ಲಾ ವೈದ್ಯರು ಹಗಲಿರುಳು ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಉಣಕಲ್ ಗ್ರಾಮದ ಪಶುವೈದ್ಯರು ಮೃತ್ಯುವಿನ ಬಾಗಿಲು ತಟ್ಟಿದ್ದ ಅನಾಥ ಗರ್ಭಿಣಿ ಹಸುವಿಗೆ ಮರುಜನ್ಮ ನೀಡಿದ ಹೃದಯ ಸ್ಪರ್ಶಿ ಘಟನೆ ಉಣಕಲ್ ಸಿದ್ದಪ್ಪಜ್ಜನ ಹೊಸಮಠದ ಆವರಣದಲ್ಲಿ ಜರುಗಿದೆ.
ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನದ ಬಯಲಿನಲ್ಲಿ ಪರಸ್ಪರ ಬಡಿದಾಡುತ್ತ ಬಂದ ನಾಲ್ಕಾರು ದನಗಳು ಗರ್ಭಿಣಿ ಹಸುವೊಂದನ್ನು ಕೆಳಗೆ ಬೀಳಿಸಿ ದಾಳಿ ನಡೆಸುವ ಮೂಲಕ ಅದರ ಹೊಟ್ಟೆಗೆ ಇರಿದು ಗಾಯಗೊಳಿಸಿದ್ದವು.
ಪ್ರಜ್ಞೆ ತಪ್ಪಿದ ಹಸು ನರಳುತ್ತ ಬಯಲಿನಲ್ಲಿ ಬಿದ್ದಿತ್ತು, ಅದೇ ಮಾರ್ಗವಾಗಿ ಹೊರಟಿದ್ದ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಜಣ್ಣ ಕೊರವಿ ಹಾಗೂ ಸಂಗಡಿಗರು ಹಸುವಿನ ನೋವಿಗೆ ಸ್ಪಂದಿಸಿ ಅದರ ಉಪಚಾರಕ್ಕೆ ಮುಂದಾದರು.
ತಕ್ಷಣ ಉಣಕಲ್ ಪಶುವೈದ್ಯರನ್ನು ಕರೆದು ಪರಿಸ್ಥಿತಿ ವಿವರಿಸಿದಾಗ, ಗರ್ಭದಲ್ಲಿರುವ ಕರು ಸತ್ತಿದ್ದು, ಹಸುವನ್ನು ಉಳಿಸುವ ಪ್ರಯತ್ನಕ್ಕೆ ಅವರೆಲ್ಲ ಮುಂದಾದರು. ವೈದ್ಯರ ಸಲಹೆಯನ್ವಯ ಹಸುವಿಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದಾಗ ಹಸುವನ್ನು ಟಂಟಂ ವಾಹನದ ಮೂಲಕ ಸಿದ್ದಪ್ಪಜ್ಜನ ಹೊಸಮಠದ ಆವರಣಕ್ಕೆ ಸ್ಥಳಾಂತರಿಸಲಾಯಿತು.
ಮಧ್ಯಾಹ್ನದಿಂದ ಸಂಜೆವರೆಗೆ ಉಣಕಲ್ ಹಾಗೂ ಹುಬ್ಬಳ್ಳಿ ಪಶುವೈದ್ಯರ ತಂಡ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಿರ್ವಹಿಸಿದರು. ಹೊಟ್ಟೆಯಲ್ಲಿ ಸತ್ತುಹೋದ ಕರುವನ್ನು ಹೊರತಗೆದು, ಹೊಲಿಗೆ ಹಾಕಿ ಅಗತ್ಯದ ಔಷಧೀಯ ಚಿಕಿತ್ಸೆ ನೀಡಲಾಯಿತು. ಪಶುವೈದ್ಯ ತಂಡದ ಶ್ರಮದಿಂದ ಹಾಗೂ ಉಣಕಲ್ ಗ್ರಾಮಸ್ಥರ ಸಹಕಾರದಿಂದ ದೇವರ ಅನುಗ್ರಹ ಶನಿವಾರ ಬೆಳಿಗ್ಗೆ ಹಸು ಚೇತರಿಕೊಂಡು ಎದ್ದು ನಿಂತಿತು.
ಹಸುವಿನ ಶಸ್ತ್ರಚಿಕಿತ್ಸೆ ಯಲ್ಲಿ ಡಾ.ಈರಣ್ಣ ಸುಂಕದ, ಡಾ. ಶರಣು ಬದಾಮಿ, ಡಾ. ಹೊನ್ನಿನಾಯ್ಕರ ಸಿಬ್ಬಂದಿ ಗಳಾದ ಕೆ.ಬಿ.ಹುಬ್ಬಳ್ಳಿ, ಮೌನೇಶ ಹಾಗೂ ಎಸ್.ಕೆ.ಗೌಡರ ಪಾಲ್ಗೊಂಡಿದ್ದರು,
ಉಣಕಲ್ ಗ್ರಾಮದ ಹಿರಿಯರಾದ ಮೂರುಸಾವಿರಪ್ಪ ಕೊರವಿ ಸೇರಿದಂತೆ ಗಣ್ಯ ಮಾನ್ಯರು ವಿಶೇಷವಾಗಿ ಯುವಕರು ಅಗತ್ಯದ ಸಹಕಾರ ನೀಡಿದರು.