ಶಿಕ್ಷಕರ ನೇಮಕಾತಿ:ಷರತ್ತಿನ ನೆವದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ತಾರತಮ್ಯ
ಹುಬ್ಬಳ್ಳಿ, ಮಾರ್ಚ್ 11:ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2015ರ ಡಿ. 31ರವರೆಗೆ ಖಾಲಿಯಾದ ಹುದ್ದೆಗಳ ಭರ್ತಿಗೆ ಇತ್ತೀಚೆಗೆ ಒಪ್ಪಿಗೆ ನೀಡಿರುವ ಸರ್ಕಾರ, ವಿವಿಧ ಷರತ್ತುಗಳನ್ನು ವಿಧಿಸುವ ಮೂಲಕ ಅಭದ್ರತೆಗೆ ದಾರಿ ಮಾಡಿಕೊಟ್ಟಿದೆ.
ಹೌದು, ಇದರಿಂದಾಗಿ ಸಾವಿರಾರು ಅರ್ಹರಿಗೆ ನೌಕರಿ ಸಿಕ್ಕರೂ ಷರತ್ತುಗಳ ತೂಗುಗತ್ತಿಯ ಭಯ ಕಾಡುತ್ತಲೇ ಇರುತ್ತದೆ. ಷರತ್ತುಗಳ ಪ್ರಕಾರ, ಈಗಾಗಲೇ ಅನುದಾನಕ್ಕೊಳಪಟ್ಟಿರುವ ಶಾಲೆಯ ಒಟ್ಟಾರೆ ಫಲಿತಾಂಶದ ಬದಲು ವಿಷಯವಾರು ಫಲಿತಾಂಶ ಪರಿಗಣಿಸಿ, ಶೇ. 60ಕ್ಕಿಂತ ಕಡಿಮೆ ಪಡೆದಿರುವ ವಿಷಯ ಶಿಕ್ಷಕರ ವಾರ್ಷಿಕ ವೇತನ ಬಡ್ತಿ ತಡೆಹಿಡಿಯಲಾಗುತ್ತದೆ.
10,611 ಸರ್ಕಾರಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಅನುದಾನ ಪಡೆಯುತ್ತಿರುವ ವಿಷಯ ಶಿಕ್ಷಕರು ನಿರಂತರ ಮೂರು ವರ್ಷ ಶೇ. 60ಕ್ಕಿಂತ ಕಡಿಮೆ ಫಲಿತಾಂಶ ನೀಡಿದಲ್ಲಿ ಅಂಥವರ ವೇತನ ಅನುದಾನವನ್ನೇ ತಡೆಹಿಡಿಯಲಾಗುತ್ತದೆ.
ಒಂದು ಅನುದಾನಿತ ಪ್ರೌಢಶಾಲೆ ಸತತ ಐದು ವರ್ಷದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ 5 ವರ್ಷ ನಿರಂತರ ಕನಿಷ್ಠ ಶೇ. 50 ವಿದ್ಯಾರ್ಥಿಗಳು ಉತ್ತೀರ್ಣರಾಗದಿದ್ದಲ್ಲಿ ಶಾಲೆಗೆ ನೀಡುತ್ತಿರುವ ವೇತನ ಅನುದಾನ ತಡೆ ಹಿಡಿಯಲಾಗುತ್ತದೆ.
ಈ ಷರತ್ತುಗಳ ಪಾಲನೆ ಕುರಿತು ಆಯಾ ಪ್ರದೇಶದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿವರ್ಷವೂ ಮೇಲುಸ್ತುವಾರಿ ಕ್ರಮ ಕೈಗೊಳ್ಳಬೇಕು. ಅದರ ವರದಿಯನ್ನು ಇಲಾಖೆ ಆಯುಕ್ತರು ಅಥವಾ ಅಪರ ಆಯುಕ್ತರಿಗೆ ಸಲ್ಲಿಸಬೇಕು. ಆದರೆ ಈ ಷರತ್ತುಗಳ ಬಗ್ಗೆ ಅರ್ಹ ಅಭ್ಯರ್ಥಿಗಳು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಿಂದ ಈಗಲೇ ವಿರೋಧ ವ್ಯಕ್ತವಾಗಿದೆ.
ಸರ್ಕಾರಿ ಪ್ರೌಢಶಾಲೆಗಳಿಗೆ ಇಲ್ಲದ ನಿಯಮಗಳನ್ನು ಅನುದಾನಿತ ಸಂಸ್ಥೆಗಳಿಗೆ ವಿಧಿಸಲಾಗುತ್ತಿದೆ. ಇದು ತಾರತಮ್ಯವಷ್ಟೇ ಅಲ್ಲ, ಷರತ್ತುಗಳ ನೆವದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿಸುವ ಹುನ್ನಾರವಾಗಿದೆ. ಬಹಳ ವರ್ಷದಿಂದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಒಪ್ಪಿಗೆ ನೀಡಿದರೂ ನಿಬಂಧನೆಗಳ ಕಾರಣದಿಂದಾಗಿ ಹೊಸ ವಿವಾದವನ್ನು ಸರ್ಕಾರ ಹುಟ್ಟುಹಾಕಿದೆ ಎಂಬ ಕೂಗು ಕೇಳಿಬರತೊಡಗಿದೆ.