ಬರ ನಿರ್ವಹಣೆಗೆ ಪ್ರತಿ ವಿಧಾನಸಬಾ ಕ್ಷೇತ್ರಕ್ಕೆ 60 ಲಕ್ಷ : ದೇಶಪಾಂಡೆ
ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಕ್ಕೆ 60ಲಕ್ಷ ರು ಹಾಗೂ ಸಿಆರ್ಎಫ್ ಅಡಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 4 ಕೋಟಿಗಳಷ್ಟು ಹಣ ನೀಡಲಾಗಿದೆ ಎಂದು ಬೃಹತ್ ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಹುಬ್ಬಳ್ಳಿ, ಡಿಸೆಂಬರ್ . 16 : ರಾಜ್ಯದಲ್ಲಿ ಸತತ 3-4 ವರ್ಷಗಳಿಂದ ಬರಗಾಲವಿದೆ. ಬರ ನಿರ್ವಹಣೆ ಕಾರ್ಯಪಡೆಗೆ ಪ್ರತಿ ತಾಲ್ಲೂಕಿಗೆ 60 ಲಕ್ಷ ರೂ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಿ ಆರ್ ಎಫ್ ಅಡಿ ಸುಮಾರು 4 ಕೋಟಿ ರೂ. ಅನುದಾನವಿದೆ.
ಈ ಹಣವನ್ನು ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ಬಳಸಲಾಗುವದು ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.
ಗುರುವಾರ ಹುಬ್ಬಳ್ಳಿ ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ನಿರ್ವಹಣಾ ಕಾರ್ಯ ಪಡೆಗೆ ಈಗಾಗಲೇ ಅನುದಾನ ಒದಗಿಸಲಾಗಿದೆ ಎಂದರು.
ಈ ಹಣವನ್ನು ಜನತೆಗೆ ಕುಡಿಯುವ ನೀರು ಹಾಗು ಜಾನುವಾರುಗಳ ಮೇವು ಮತ್ತು ನೀರಿಗಾಗಿ ಸಮರ್ಪಕವಾಗಿ ಪೂರೈಕೆಯಾಗುವಂತೆ ಕ್ರಮಕೈಗೊಳ್ಳಲು ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.
ರೈತರು ಮೇವು ಉಚಿತವಾಗಿ ಪೂರೈಸಲು ಮನವಿ ಮಾಡುತ್ತಿದ್ದಾರೆ. ಇದು ರಾಜ್ಯ ಮಟ್ಟದಲ್ಲಿ ತೀರ್ಮಾನವಾಗಬೇಕು.
ಡಿ.20ರ ಬಳಿಕ ಸಲ್ಲಿಸುವ ಬರ ಅಧ್ಯಯನ ವರದಿಯಲ್ಲಿ ಈ ಶಿಫಾರಸು ಮಾಡುತ್ತೇನೆ. ಗ್ರಾ. ಪಂ, ತಾಲ್ಲೂಕು ಕಚೇರಿ ಮತ್ತಿತರ ಸ್ಥಳಗಳಲ್ಲಿ ದೂರು ದಾಖಲಿಸಲು ರಜಿಸ್ಟರ್ ಗಳನ್ನು ಇಡಬೇಕು. 24x7 ಸಹಾಯವಾಣಿ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.