ಕಾಶ್ಮೀರಿ ವಿದ್ಯಾರ್ಥಿಗಳ ದೇಶದ್ರೋಹ ಪ್ರಕರಣ: ಪೊಲೀಸ್ ವಿಶೇಷ ತನಿಖೆ
ಹುಬ್ಬಳ್ಳಿ, ಫೆಬ್ರವರಿ 22: ಕಾಲೇಜಿನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಮೂವರು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ತನಿಖೆಗೆ ಪೊಲೀಸರ ವಿಶೇಷ ತಂಡವನ್ನು ನಿಯೋಜಿಸಲಾಗಿದೆ.
ಪ್ರಕರಣ ಸಂಬಂಧ ಹುಬ್ಬಳ್ಳಿ ಜಿಲ್ಲಾ ಪೊಲೀಸ್ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದು, ಡಿಎಸ್ಪಿ ಇರುವ ಅಧಿಕಾರಿಯ ನೇತೃತ್ವದಲ್ಲಿ ತಂಡ ತನಿಖೆ ನಡೆಸಲಿದೆ. ತನಿಖೆ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್ ತಂಡ ಬೆಳಗಾವಿಯ ಹಿಂಡಲಗ ಕೇಂದ್ರೀಯ ಕಾರಾಗೃಹಕ್ಕೆ ಶೀಘ್ರದಲ್ಲಿಯೇ ಭೇಟಿ ನೀಡಲಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಲಿದೆ.
ಬಂಧಿತ 3 ಕಾಶ್ಮೀರಿ ವಿದ್ಯಾರ್ಥಿಗಳು ಕೆಎಲ್ಇಯಿಂದ ಸಸ್ಪೆಂಡ್
ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ವಿಡಿಯೋದಲ್ಲಿ ಕಾಶ್ಮೀರದ ಮೂಲದ ಮೂವರು ಕೆಎಲ್ಇ ಕಾಲೇಜಿನ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದರು. ಇದಕ್ಕೆ ದೇಶದಾದ್ಯಂತ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು.
ಕೆಎಲ್ಇ ಕಾಲೇಜಿನಲ್ಲಿದ್ದ ಕಾಶ್ಮೀರಿ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣದಿಂದ ಕಾಲೇಜಿನಲ್ಲೇ ಇದ್ದ ಇನ್ನುಳಿದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಅಭದ್ರತೆ ಕಾಡಲು ಪ್ರಾರಂಭವಾಗಿದೆ. ಪಾಕ್ ಪರ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇನ್ನೂ ನಾಲ್ವರು ಕಾಶ್ಮೀರದ ವಿದ್ಯಾರ್ಥಿಗಳು ಕೆಎಲ್ಇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕಾಶ್ಮೀರ ವಿದ್ಯಾರ್ಥಿಗಳ ಪಾಕ್ ಪರ ಘೋಷಣೆ ಇರುವ ವಿಡಿಯೋ ವೈರಲ್ ಆದಾಗಿನಿಂದಲೂ ಕ್ಯಾಂಪಸ್ ಹಾಗೂ ಹಾಸ್ಟೆಲ್ ನಲ್ಲಿ ಅಹಿತಕರ ವಾತಾವರಣ ಮೂಡಿದೆ. ಅಷ್ಟೇ ಅಲ್ಲದೇ ಆ ವಿದ್ಯಾರ್ಥಿಗಳ ಮೇಲೆ ಕೋರ್ಟ್ ಬಳಿ ಹಲ್ಲೆ ನಡೆದ ಬಳಿಕ ಉಳಿದ ಕಾಶ್ಮೀರಿ ವಿದ್ಯಾರ್ಥಿಗಳಲ್ಲಿ ಅಭದ್ರತೆ ಕಾಡುತ್ತಿದೆ.
ನಾಲ್ವರ ಪೈಕಿ ಇಬ್ಬರು ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದರೆ ಉಳಿದ ಇಬ್ಬರು ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ರಜೆ ಹಿನ್ನೆಲೆಯಲ್ಲಿ ನಾಲ್ವರು ವಿದ್ಯಾರ್ಥಿಗಳ ಪೈಕಿ ಇಬ್ಬರು ತಮ್ಮ ಊರುಗಳಿಗೆ ತೆರಳಿದ್ದರು. ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮ್ಯಾನೆಜ್ಮೆಂಟ್ ನ ಸಲಹೆಯಂತೆ ತರಗತಿಗಳು ಪ್ರಾರಂಭವಾದರೂ ಇನ್ನಿಬ್ಬರು ವಿದ್ಯಾರ್ಥಿಗಳು ತಮ್ಮ ಸಂಬಂಧಿಕರ ಮನೆಯಲ್ಲೇ ಇದ್ದಾರೆ.