ಹಸಿರ ಉಳಿವಿನತ್ತ ಹೆಜ್ಜೆ: ಹುಬ್ಬಳ್ಳಿಯಲ್ಲಿ 42 ಮರಗಳಿಗೆ ವರ್ಗಾವಣೆ ಭಾಗ್ಯ!
ಹುಬ್ಬಳ್ಳಿ, ಅಕ್ಟೋಬರ್ 14: ಐಎ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಬಗ್ಗೆ ಕೇಳಿದ್ದೇವೆ, ಸರ್ಕಾರಿ ನೌಕರರಿಗೂ ಆಗಾಗ ಆ ಅವಕಾಶ ಬರುತ್ತದೆ. ಆದರೆ ನಿಶ್ಚಲ ಮರಗಳನ್ನು ವರ್ಗಾವಣೆ ಮಾಡುವ ಬಗ್ಗೆ ಕೇಳಿದ್ದೀರಾ? ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಹಸಿರನ್ನೂ ಕಾಪಾಡುವುದಕ್ಕಾಗಿ 42 ಮರಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸುರಕ್ಷಿತವಾಗಿ ಸ್ಥಳಾಂತರ ಮಾಡುವ ಮೂಲಕ ಸೌತ್ ವೆಸ್ಟರ್ನ್ ರೈಲ್ವೆ ಆದರ್ಶ ಮೆರೆದಿದೆ.
ಪರಿಸರದ ಮೇಲಿನ ಕಾಳಜಿ ನಿಧಾನವಾಗಿಯಾದರೂ ಎಲ್ಲರಲ್ಲೂ ಮೂಡುತ್ತಿದೆ ಎಂಬುದು ಸಮಾಧಾನದ ಸಂಗತಿ. ಅಭಿವೃದ್ಧಿ ಹೆಸರಿನಲ್ಲಿ ನೂರಾರು ಮರಗಳನ್ನು ಕಡಿಯುವುದನ್ನು ನಾವು ಕಂಡಿದ್ದೇವೆ. ರಸ್ತೆ ವಿಸ್ತರಣೆ, ಫ್ಲೈಓವರ್ ನಿರ್ಮಾಣ, ವಾಣಿಜ್ಯ ಸಂಕೀರ್ಣ ನಿರ್ಮಾಣ ಹೀಗೆ ಹಲವು ನೆಪವೊಡ್ಡಿ ಮರಗಳ ಮಾರಣ ಹೋಮ ಮಾಡಿರುವುದನ್ನು ನೋಡಿದ್ದೇವೆ.
ಆದರೆ ಸೌತ್ ವೆಸ್ಟರ್ನ್ ರೈಲ್ವೆ ಇಲಾಖೆ ಹೊಸ ಪ್ರಯತ್ನಕ್ಕೆ ಕೈಹಾಕಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹುಬ್ಬಳ್ಳಿ ಚಿಕ್ಕಜಾಜೂರ ಮಾರ್ಗ ಈ ವರೆಗೆ ಸಿಂಗಲ್ ಲೈನ್ ಇದ್ದು ಈ ಮಾರ್ಗವನ್ನು ಡಬಲ್ ಲೈನಗೆ ಹೆಚ್ಚಿಸಲಾಗುತ್ತಿದೆ . ಹೀಗಾಗಿ ದೇವರಗುಡ್ಡ ರೈಲು ನಿಲ್ದಾಣದ ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವ 42 ಮರಗಳನ್ನು ಕಡಿಯದೆ, ಅವುಗಳನ್ನು ಮೂಲ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವ ತಾಂತ್ರಿಕತೆಯನ್ನು ಮೈಗೂಡಿಸಿಕೊಂಡು ಸೌತ್ ವೆಸ್ಟರ್ನ್ ರೈಲ್ವೆ 42 ಮರಗಳನ್ನು ಬೇರೆಡೆ ಸ್ಥಳಾಂತರಿಸಿದೆ.
ಈ ಕೆಲಸವನ್ನು ಗ್ರೀನ್ ಮಾರ್ನಿಂಗ್ ಹಾರ್ಟಿಕಲ್ಚರ್ ಪ್ರೈ. ಲಿಮಿಟೆಡ್ ಎಂಬ ಕಂಪನಿ ಗುತ್ತಿಗೆ ಪಡೆದಿದ್ದು , ತೋಟಗಾರಿಕೆ ತಜ್ಞರ ಮೇಲ್ವಿಚಾರಣೆಯಡಿ ಈ ಕೆಲಸವನ್ನು ಮಾಡಲಾಗುತ್ತಿದೆ.
ಬೇರುಗಳನ್ನು ಬೇರ್ಪಡಿಸುವ ಮೂಲಕ ಬೇರುಗಳನ್ನು ರಕ್ಷಿಸಿ, ಕ್ರೇನ್ ಬಳಸಿ ಹೊಸ ಸ್ಥಳಕ್ಕೆ ಸ್ಥಳಾಂತರಿಸುವುದು, ಅಗತ್ಯವಿರುವ ಆಳಕ್ಕೆ ಕಸಿ ಮತ್ತು ಮತ್ತಷ್ಟು ಗೊಬ್ಬರ ಮತ್ತು ರಸಗೊಬ್ಬರಗಳನ್ನು ಒದಗಿಸುವುದು, ಕೀಟನಾಶಕಗಳನ್ನು ಒದಗಿಸುವುದಲ್ಲದೆ 6 ತಿಂಗಳ ಕಾಲ ಈ ಮರಗಳ ಆರೈಕೆಯನ್ನು ಗುತ್ತಿಗೆ ಪಡೆದ ಕಂಪನಿಯವರೇ ಮಾಡಲಿದ್ದಾರೆ. ಒಟ್ಟಿನಲ್ಲಿ ವಿದೇಶಕ್ಕೆ ಮಾತ್ರ ಸೀಮಿತವಾಗಿದ್ದ ಈ ತಂತ್ರಜ್ಞಾನ ನಮ್ಮ ದೇಶದಲ್ಲಿ ಬಳಕೆ ಮಾಡಿ, ರೈಲ್ವೆ ಇಲಾಖೆ ಪರಿಸರವಾದಿಗಳ ಪ್ರೀತಿಗೆ ಪಾತ್ರವಾಗಿದೆ.