ಉದ್ಯೋಗಿಗಳ ಓಡಾಟಕ್ಕೆ ವಿಶೇಷ ರೈಲು ಓಡಿಸುತ್ತಿದೆ ನೈರೈತ್ಯ ರೈಲ್ವೆ
ಹುಬ್ಬಳ್ಳಿ, ಏಪ್ರಿಲ್ 08: ಕೊರೊನಾ ಹರಡದಂತೆ ತಡೆಯಲು ದೇಶದಲ್ಲಿ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಬಸ್, ರೈಲು ಸೇರಿದಂತೆ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಆದರೆ, ಭಾರತೀಯ ರೈಲ್ವೆಯ ಗೂಡ್ಸ್ ಸೇವೆಯನ್ನು ಸ್ಥಗಿತಗೊಳಿಸಿಲ್ಲ.
ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲ್ವೆಯ ಕಚೇರಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ದಿನನಿತ್ಯ ಹಲವು ಉದ್ಯೋಗಿಗಳು ಕಚೇರಿಗೆ ಬರಲೇಬೇಕಿದೆ. ಆದರೆ, ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅವರು ಸಂಕಷ್ಟಕ್ಕೆ ಸಿಲುಕಿದ್ದರು.
ಏಪ್ರಿಲ್ 30ರವರೆಗೆ ರೈಲು ಸಂಚಾರವಿಲ್ಲ: ಮುಂಗಡ ಕಾಯ್ದಿರಿಸಿದ್ದವರಿಗೆ ಹಣ ವಾಪಸ್
ಉದ್ಯೋಗಿಗಳ ಹಿತದೃಷ್ಟಿಯಿಂದ ನೈಋತ್ಯ ರೈಲ್ವೆ ವಿಶೇಷ ರೈಲನ್ನು ಓಡಿಸುತ್ತಿದೆ. 60 ನೌಕರರು 8 ದಿನ ಓಡಾಟ ನಡೆಸಲು ಇಂಧನಕ್ಕಾಗಿಯೇ ರೈಲ್ವೆ 11 ಲಕ್ಷ ವೆಚ್ಚ ಮಾಡುತ್ತಿದೆ. ಮಾರ್ಚ್ 31ರಿಂದ ವಿಶೇಷ ರೈಲು ಸಂಚಾರವನ್ನು ನಡೆಸುತ್ತಿದೆ.
ಹುಬ್ಬಳ್ಳಿ ರೈಲು ನಿಲ್ದಾಣದಿಂದ ಬೆಳಗ್ಗೆ 6.30ಕ್ಕೆ ಹೊರಡುವ ರೈಲು 131 ಕಿ. ಮೀ. ಅಂತರದಲ್ಲಿರುವ ಹರಿಹರವನ್ನು 9ಕ್ಕೆ ತಲುಪುತ್ತದೆ. ಸಂಜೆ 6.15ಕ್ಕೆ ಹರಿಹರದಿಂದ ಹೊರಟು, 8.45ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ವಾಪಸ್ ಆಗುತ್ತದೆ.
ಇದೇ ಮಾದರಿಯಲ್ಲಿ ಮತ್ತೊಂದು ರೈಲು ಹರಿಹರ-ಹುಬ್ಬಳ್ಳಿ, ಹುಬ್ಬಳ್ಳಿ-ಹರಿಹರ ನಡುವೆ ಸಂಚಾರ ನಡೆಸುತ್ತದೆ. ಈ ವಿಶೇಷ ರೈಲು ಎರಡು ಬೋಗಿ ಮತ್ತು ಇಂಜಿನ್ ಒಳಗೊಂಡಿದೆ.
ಒಂದು ಪೋನ್ ಕರೆ; ಮನೆ ಬಾಗಿಲಿಗೆ ಬರಲಿದೆ ಔಷಧಿ
ಲಾಕ್ ಡೌನ್ ಇದ್ದರೂ ಅಗತ್ಯ ಸರಕು ಸಾಗಣೆಗಾಗಿ ರೈಲುಗಳು ಸಂಚಾರ ನಡೆಸುತ್ತಿವೆ. ಆದ್ದರಿಂದ, ನೌಕರರು ಕರ್ತವ್ಯಕ್ಕೆ ಹಾಜರಾಗಲು ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ರೈಲಿನ ಸಂಚಾರಕ್ಕೆ ದಿನಕ್ಕೆ ಸುಮಾರು 1.40 ಲಕ್ಷ ವೆಚ್ಚವಾಗುತ್ತಿದೆ. 8 ದಿನ ರೈಲನ್ನು ಓಡಿಸಲು ಸುಮಾರು 8 ಲಕ್ಷ ರೂ. ಇಂಧನಕ್ಕಾಗಿಯೇ ವೆಚ್ಚ ಮಾಡಲಾಗುತ್ತಿದೆ.