ಕಲ್ಲು ತೂರಿದವರು ನಮ್ಮವರಲ್ಲ; ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ಹುಬ್ಬಳ್ಳಿ, ಸೆಪ್ಟೆಂಬರ್ 5: "ಡಿ.ಕೆ.ಶಿವಕುಮಾರ್ ಬಂಧನದ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಕಲ್ಲು ತೂರಿದವರು ಕಾಂಗ್ರೆಸ್ ಕಾರ್ಯಕರ್ತರಲ್ಲ, ಹಿಂಸಾಚಾರದಲ್ಲಿ ನಮ್ಮವರು ತೊಡಗಿಕೊಂಡಿಲ್ಲ" ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಇಂದು ಮಾತನಾಡಿದ ಅವರು, " ಪ್ರತಿಭಟನೆ ವೇಳೆಯಲ್ಲಿ ಕಲ್ಲು ತೂರಾಟ ಮಾಡಿದವರು, ಬೆಂಕಿ ಹೊತ್ತಿಸಿದವರು ಯಾರೂ ನಮ್ಮ ಕಾರ್ಯಕರ್ತರಲ್ಲ. ಕಾಂಗ್ರೆಸ್ ನವರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲ ಕಿಡಿಗೇಡಿಗಳು ಇಂಥ ಕೃತ್ಯ ಎಸಗಿದ್ದಾರೆ. ಕಾರ್ಯಕರ್ತರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಸೂಚಿಸಲಾಗಿತ್ತು" ಎಂದು ಹೇಳಿದರು.
ಡಿಕೆಶಿ ಹುಟ್ಟೂರು ದೊಡ್ಡಾಲಳ್ಳಿಯಲ್ಲಿ ತೀವ್ರ ಆಕ್ರೋಶ; ಮೋದಿ, ಶಾ ಅಣಕು ತಿಥಿ
ಇದೇ ಸಂದರ್ಭದಲ್ಲಿ, "ಡಿಕೆಶಿ ಬಂಧನ ರಾಜಕೀಯ ಪ್ರೇರಿತ. ಅದರಲ್ಲಿ ಯಾವುದೇ ಸಂಶಯ ಇಲ್ಲ" ಎಂದೂ ಹೇಳಿದ್ದಾರೆ.
ನೆರೆ ಪರಿಹಾರದ ಕುರಿತೂ ಮಾತನಾಡಿದ ಅವರು, "ರಾಜ್ಯದಲ್ಲಿ ಕಳೆದ ತಿಂಗಳು ಉಂಟಾದ ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಕೊಟ್ಟ ಹತ್ತು ಸಾವಿರ ಪರಿಹಾರವೂ ಸರಿಯಾಗಿ ಸಂತ್ರಸ್ತರಿಗೆ ತಲುಪಿಲ್ಲ. ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿ ಎಂದು ಡಿಸಿಗಳಿಗೆ ಸೂಚಿಸಿದ್ದೆ, ಅದೂ ಆಗಿಲ್ಲ" ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.