ಕಡೆಗೂ ಹನುಮಂತಪ್ಪನ ಪತ್ನಿಗೆ ಜಮೀನು ಹಸ್ತಾಂತರ
ಬೆಂಗಳೂರು, ಮಾರ್ಚ್ 07 : ವೀರ ಯೋಧ ಗಂಡ ಹನುಮಂತಪ್ಪನನ್ನು ಕಳೆದುಕೊಂಡ ಮಹಾದೇವಿ ಕೊಪ್ಪದ ಅವರಿಗೆ ಕಡೆಗೂ ಜಮೀನನ್ನು ಹಸ್ತಾಂತರಿಸಲಾಗಿದೆ. ನಾಲ್ಕೆಕರೆ ಜಮೀನಿನ ದಾಖಲೆಗಳನ್ನು ಕುಂದಗೋಳದ ಶಾಸಕ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ನೀಡಿದರು.
ಸಿಯಾಚಿನ್ ಯುದ್ಧಭೂಮಿಯಲ್ಲಿ ಹಿಮಪಾತದಲ್ಲಿ ಸಿಲುಕಿ ಹುತಾತ್ಮನಾದ ಹನುಮಂತಪ್ಪ ಕೊಪ್ಪದ ಫೆಬ್ರವರಿ 11ರಂದು ತೀರಿಕೊಂಡಾಗ, ಮಹಾದೇವಿ ಅವರಿಗೆ ಜಮೀನು ನೀಡುವುದಾಗಿ ರಾಜ್ಯ ಸರಕಾರ ವಾಗ್ದಾನ ನೀಡಿತ್ತು. ಆ ವಾಗ್ದಾನವನ್ನು ಒಂದು ವರ್ಷದ ನಂತರ ಉಳಿಸಿಕೊಂಡಿದೆ.[ಹನುಮಂತಪ್ಪನ ಕಂಚಿನ ಪ್ರತಿಮೆ ಸ್ಥಾಪನೆಗೆ ಸಿದ್ಧತೆ]
ಕಡೆಗೂ ಜಮೀನು ಸಿಕ್ಕಿದ ಸಂತೋಷವನ್ನು ಒನ್ಇಂಡಿಯಾದೊಂದಿಗೆ ಹಂಚಿಕೊಂಡ ಮಹಾದೇವಿ, ತಹಶೀಲ್ದಾರ್ ಕಚೇರಿಯಲ್ಲಿ ಸ್ಥಳೀಯ ಶಾಸಕ ಶಿವಳ್ಳಿಯವರು ಮತ್ತಿಗಟ್ಟಿ ಗ್ರಾಮದಲ್ಲಿ ಇರುವ ಜಮೀನಿನ ಕಾಗದಪತ್ರಗಳನ್ನು ಹಸ್ತಾಂತರಿಸಿದ ಘಳಿಗೆಯ ಚಿತ್ರಗಳನ್ನು ಕಳುಹಿಸಿಕೊಟ್ಟಿದ್ದಾರೆ.[ದೇಶಭಕ್ತರು ಬೇಕು ನಿಜ, ಆದ್ರೆ ಇಂಥ 'ದೇಶಭಕ್ತ'ರು ಬೇಡ್ವೇಬೇಡ ಸ್ವಾಮಿ!]
"ಹುತಾತ್ಮರ ಕುಟುಂಬಕ್ಕೆ ಭರವಸೆಗಳನ್ನು ಈಡೇರಿಸಬೇಕು. ರಾಜ್ಯ ಸರಕಾರ ಮತ್ತು ಸ್ಥಳೀಯ ಶಾಸಕರು ಬೆಂಬಲವಾಗಿ ನಿಂತಿದ್ದು ತುಂಬಾ ಸಂತೋಷ ಆಗೇತಿ. ಇನ್ನು ಉಳಿದಿರೋ ಮಾತನ್ನೂ ಉಳಿಸಿಕೊಳ್ಳಬೇಕು" ಎಂದು ಮಹಾದೇವಿ ಒನ್ಇಂಡಿಯಾಗೆ ತಿಳಿಸಿದರು. ಉಳಿದಿರುವ ಮಾತು, ಕೆಲಸ ಕೊಡಬೇಕಿರುವುದು.[ಮಹಾದೇವಿಗೆ ಸಂಸದರಿಂದಲೂ ಹರಿದುಬಂದ ಸಹಾಯಹಸ್ತ]
ಈ ಸಂದರ್ಭದಲ್ಲಿ ಮಾತನಾಡಿದ ಶಿವಳ್ಳಿ ಅವರು, "ಮಾತು ಕೊಟ್ಟಂತೆ ಹುಬ್ಬಳ್ಳಿಯಲ್ಲಿ ನಿವೇಶನ, 25 ಲಕ್ಷ ರುಪಾಯಿ ಪರಿಹಾರ ಮತ್ತು ನಾಲ್ಕೆಕರೆ ಜಮೀನನ್ನು ಮಹಾದೇವಿಯವರಿಗೆ ನೀಡಲಾಗಿದೆ. ಹನುಮಂತಪ್ಪ ನೆನಪಿಗಾಗಿ ಹುಬ್ಬಳ್ಳಿಯ ಪ್ರಮುಖ ರಸ್ತೆಗೆ ಅವರ ಹೆಸರು ಇಡಲಾಗುವುದು ಮತ್ತು ಕೆಲಸವನ್ನೂ ನೀಡಲಾಗುವುದು" ಎಂದರು.[ಮಾನವೀಯತೆಯ ಇದ್ದರೆ ಮಹಾದೇವಿಗೆ ಕೆಲಸ ಕೊಡಲಿ : ಜೋಶಿ]
ಕೆಲ ದಿನಗಳ ಹಿಂದೆ, ವೀರಯೋಧ ಹನುಮಂತಪ್ಪನ ಕುಟುಂಬಕ್ಕೆ, ಸರಕಾರಿ ಕಚೇರಿಯಲ್ಲಿ ಉದ್ಯೋಗ ಸೇರಿದಂತೆ ಎಲ್ಲ ವಾಗ್ದಾನಗಳನ್ನು ಪೂರೈಸಬೇಕು ಎಂದು ಆಗ್ರಹಿಸಿ ಅಭಿಯಾನವನ್ನು ಪ್ರಾರಂಭಿಸಿತ್ತು. ಇದಕ್ಕೆ ಪ್ರತಿಸ್ಪಂದಿಸಿದ ರಾಜ್ಯ ಸರಕಾರ ಕೆಲವೇ ದಿನಗಳಲ್ಲಿ ಸರಕಾರಿ ಕಚೇರಿಯಲ್ಲಿ ಸೂಕ್ತ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆ.