ಹುಬ್ಬಳ್ಳಿ: ಅಂಗಾಗ ದಾನ ಮಾಡಿ ಸಾರ್ಥಕತೆ ಮೆರೆದ ಬಡ ಕುಟುಂಬ
ಹುಬ್ಬಳ್ಳಿ, ಆಗಸ್ಟ್, 18: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ 30 ವರ್ಷದ ವ್ಯಕ್ತಿಯ ಯಕೃತ್ ಅನ್ನು ಬೆಂಗಳೂರಿಗೆ ರವಾನಿಸಲಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಝೀರೋ ಟ್ರಾಫಿಕ್ನಲ್ಲಿ 6.5 ಕಿಲೋ ಮೀಟರ್ ಮಾರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ರವಾನೆ ಮಾಡಲಾಗಿತ್ತು. ಕೇಲವ ಎರಡು ನಿಮಿಷದಲ್ಲಿ ಜಿಲ್ಲೆಯ ಶಿವಪುರ ತಾಂಡಾದ ಪ್ರಕಾಶ್ ಲಮಾಣಿ ಅವರ ಯಕೃತ್ ಅನ್ನು ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗಿತ್ತು. ಅಂಗಾಂಗ ಕಸಿಗೆ ಯಕೃತ್ ಅನ್ನು ಬೆಂಗಳೂರಿನ ಆಸ್ಟರ್ ಆರ್.ವಿ. ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕುಟುಂಬದವರ ಒಪ್ಪಿಗೆಯಂತೆ ವೈದ್ಯರು ಪ್ರಕಾಶ್ ಅವರ ಯಕೃತ್ ಅನ್ನು ಬೆಂಗಳೂರಿಗೆ ಕೊಂಡೊಯ್ದಿದ್ದಾರೆ.
ಅಂಗಾಂಗ ದಾನಕ್ಕೆ ಸಿಎಂ, ಸಚಿವ ಸುಧಾಕರ್ ನಿರ್ಧಾರ
ಮೆದುಳು ನಿಷ್ಕ್ರಿಯಗೊಂಡಿದ್ದ ಪ್ರಕಾಶ್ ಲಮಾಣಿ ಎನ್ನುವವರು ಕೆಲವು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಕಾಶ್ ಲಮಾಣಿ ಅವರ ಮೆದುಳು ನಿಷ್ಕ್ರಿಯವಾಗಿದ್ದರೂ ಯಕೃತ್ ಮತ್ತು ಕಿಡ್ನಿ ಕಾರ್ಯ ನಿರ್ವಹಿಸುತ್ತಿದ್ದವು. ಹಾಗಾಗಿ ಇವರು ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಈ ಕುರಿತು ಕಿಮ್ಸ್ ವೈದ್ಯರ ತಂಡ ಹಾಗೂ ಪ್ರಕಾಶ್ ಕುಟುಂಬದವರು ಚರ್ಚೆ ಮಾಡಿದ್ದರು.
ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ
ಬೆಂಗಳೂರಿನ ಜೆ.ಪಿ. ನಗರದ ಆಸ್ಟರ್ ಆರ್.ವಿ. ಆಸ್ಪತ್ರೆಯಲ್ಲಿನ ರೋಗಿಯೊಬ್ಬರಿಗೆ ಯಕೃತ್ ಕಸಿ ಅಗತ್ಯವಿತ್ತು. ಆದ ಕಾರಣ ಅಲ್ಲಿಯ ವೈದ್ಯರ ತಂಡ ಆಗಮಿಸಿ ಪ್ರಕಾಶ್ ಅವರ ಯಕೃತ್ ಅನ್ನು ತೆಗೆದಿದ್ದಾರೆ. ನಮ್ಮಲ್ಲಿಯೇ ದಾಖಲಾದ 39 ವರ್ಷದ ವ್ಯಕ್ತಿಗೆ ಅವರ ಕಿಡ್ನಿ ತೆಗೆದು ಕಸಿ ಮಾಡಲಾಗಿದೆ. ಕುಟುಂಬದ ಒಪ್ಪಿಗೆಯ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯು ಅಂಗಾಂಗ ದಾನ ಮಾಡಿದ್ದು, ಇದೀಗ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸನೀಯ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿಯೇ ಇದು ಮೊದಲನೆಯದಾಗಿದೆ. ಈ ಮೂಲಕ ಕಿಮ್ಸ್ ಹೊಸ ಇತಿಹಾಸ ನಿರ್ಮಿಸಿದೆ ಎಂದು ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.
ಝೀರೋ ಟ್ರಾಫಿಕ್ನಲ್ಲಿ ಯಕೃತ್ ಸಾಗಾಟ
ವೈದ್ಯರ ಕೋರಿಕೆ ಮೇರೆಗೆ ಕಿಮ್ಸ್ ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ 6.5 ಕಿಲೋ ಮೀಟರ್ ಮಾರ್ಗವನ್ನು ಝೀರೊ ಟ್ರಾಫಿಕ್ ಮಾಡಲಾಗಿತ್ತು. ಝೀರೋ ಟ್ರಾಫಿಕ್ ಮೂಲಕ ಯಕೃತ್ ಅನ್ನು ತೆಗೆದುಕೊಂಡು ಕೇವಲ ಎರಡು ನಿಮಿಷದಲ್ಲಿ ವಿಮಾನ ನಿಲ್ದಾಣಕ್ಕೆ ಆ್ಯಂಬುಲೆನ್ಸ್ ತಲುಪಿಸಿದೆ. ನಂತರ ಸ್ಟಾರ್ ಏರ್ ವಿಮಾನದ ಮೂಲಕ ಬೆಂಗಳೂರಿಗೆ ಯಕೃತ್ ಅನ್ನು ವೈದ್ಯಕೀಯ ಸಿಬ್ಬಂದಿ ಕೊಂಡೊಯ್ದಿದ್ದಾರೆ. ಹೀಗೆ ಹನುಮಂತಪ್ಪ ಮತ್ತು ಲಕ್ಕವನ ಮಗ ಪ್ರಕಾಶ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಪ್ರಕಾಶ್ ಕುಟಂಬದ ಹಿನ್ನೆಲೆ
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿವಪುರ ತಾಂಡಾದ ಹನುಮಂತಪ್ಪ ಮತ್ತು ಲಕ್ಕವ್ವ ಲಮಾಣಿ ದಂಪತಿಗೆ ಇಬ್ಬರು ಗಂಡು ಮಕ್ಕಳು. ಇವರು ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರ ಹಿರಿಯ ಮಗ ಕೆಲಸ ಹುಡುಕಿಂಕೊಂಡು ನಗರಕ್ಕೆ ಹೋಗಿದ್ದಾನೆ. ಇನ್ನು ಕಿರಿಯ ಮಗ ಪ್ರಕಾಶ್ ತಂದೆ ತಾಯಿ ಜೊತೆಗೆ ಶಿವಪುರ ತಾಂಡಾದಲ್ಲಿ ವಾಸವಾಗಿದ್ದ. ಪ್ರಕಾಶ್ ಕೆಲವು ವರ್ಷಗಳ ಹಿಂದೆ ಮದುವೆ ಆಗಿದ್ದು, ಇವರಿಗೆ ಇಬ್ಬರು ಹೆಣ್ಣು ಮತ್ತು ಒಬ್ಬ ಗಂಡು ಮಗನಿದ್ದಾನೆ. ಪ್ರಕಾಶ್ ಕುಟುಂಬವನ್ನು ನೋಡಿಕೊಳ್ಳಲು ಗ್ರಾಮದ ಬಳಿ ಇರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದ.
ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಆಗಸ್ಟ್ 13ರಂದು ಎಂದಿನಂತೆ ಕೆಲಸ ಮುಗಿಸಿಕೊಂಡು ಪ್ರಕಾಶ್ ಸಂಜೆ ಬೈಕ್ನಲ್ಲಿ ಮನೆಗೆ ಬರುವಾಗ ಅಪಘಾತ ಸಂಭವಿಸಿತ್ತು. ಆಗ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಫಲಕಾರಿಯಾಗದೇ ಪ್ರಕಾಶ್ ಮೆದುಳು ಸಂಪೂರ್ಣ ನಿಷ್ಕ್ರೀಯಗೊಂಡಿತ್ತು. ಮಗ ಬದುಕುವುದಿಲ್ಲ ಎಂದು ವೈದ್ಯರು ಹೇಳಿದಾಗ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಇದೀಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರ ಅಂಗಾಂಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.