Breaking: ಹಿರಿಯ ಸಾಹಿತಿ ನಾಡೋಜ ಪಾಟೀಲ್ ಪುಟ್ಟಪ್ಪ ವಿಧಿವಶ
ಹುಬ್ಬಳ್ಳಿ, ಮಾರ್ಚ್.16: ಹಿರಿಯ ಸಾಹಿತಿ, ಕನ್ನಡ ಪರ ಹೋರಾಟಗಾರ ಮತ್ತು ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಪಾಟೀಲ್ ಪುಟ್ಟಪ್ಪರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಪಾಟೀಲ್ ಪುಟ್ಟಪ್ಪರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಚಿಕಿತ್ಸೆ ಸ್ಪಂದಿಸದೇ ನಾಡಿನ ಹಿರಿಯ ಸಾಹಿತಿ ನಿಧನ ಹೊಂದಿದ್ದಾರೆ.
ಇನ್ನು, ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪರಿಗೆ ಮಂಜುಳಾ, ಶೈಲಜಾ ಹಾಗೂ ಅಶೋಕ್ ಎಂಬ ಮೂವರು ಮಕ್ಕಳು ಸೇರಿದಂತೆ ಅಪಾರ ಸಂಬಂಧಿಕರನ್ನು ಅಗಲಿದ್ದಾರೆ.
ಹಾವೇರಿ ಜಿಲ್ಲೆಯ ಕುರುಬಗೊಂಡದಲ್ಲಿ ಜನವರಿ.14, 1919ರಲ್ಲಿ ಸಿದ್ದಲಿಂಗಪ್ಪ ಮತ್ತು ಮಲ್ಲಮ್ಮ ದಂಪತಿ ಪುತ್ರರಾಗಿ ಪಾಟೀಲ್ ಪುಟ್ಟಪ್ಪ ಜನಿಸಿದರು. ಕನ್ನಡ ಪರ ಹೋರಾಟ, ಪತ್ರಿಕೋದ್ಯಮ, ಸಾಹಿತ್ಯ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಇವರನ್ನು ಪಾಪು ಎಂದೇ ಕರೆಯಲಾಗುತ್ತದೆ.
ಕನ್ನಡ ಪರ ಹೋರಾಟ ಮತ್ತು ಪತ್ರಿಕೋದ್ಯಮದಲ್ಲಿ ಹಿರಿಯರು ಸಲ್ಲಿಸಿದ ಸೇವೆಗೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿದ್ದವು. 1976ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಟಿಎಸ್ಆರ್ ಪತ್ರಿಕೋದ್ಯಮ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.