'ಧೈರ್ಯದಿಂದ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸಿ'
ಹುಬ್ಬಳ್ಳಿ, ಜನವರಿ.19 : ಚುನಾವಣೆಯ ಸಮಯದಲ್ಲಿ ಎಲ್ಲ ಪಕ್ಷಗಳು ದಲಿತರು, ಹಿಂದುಳಿದವರ ಅಭಿವೃದ್ಧಿ ಮಾಡುತ್ತೇವೆಂದು ಹೇಳುತ್ತಿವೆ.
ಕಳೆದ 70 ವರ್ಷಗಳಿಂದ ಈ ಮಾತು ಕೇಳಿ ಸಾಕಾಗಿದೆ ಹೊರತು ಯಾವುದೇ ರೀತಿಯಲ್ಲಿ ಕೆಳ ವರ್ಗದವರ ಅಭಿವೃದ್ಧಿಯಾಗಿಲ್ಲ ಎಂದು ವಿಧಾನ ಪರಿಷತ್ ಪ್ರತಿ ಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಅವರು ನಗರದಲ್ಲಿ ಜರುಗಿದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನ ಧಾರವಾಡ ಜಿಲ್ಲಾ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಬಡವರಿಗೆ ನ್ಯಾಯ ದೊರಕಿಸಿ ಕೊಡಲು ಮತ್ತು ಅವರ ಸಾಮರ್ಥ್ಯ ಪ್ರದರ್ಶಿಸಲು ಕೂಡಲ ಸಂಗಮದಲ್ಲಿ ಬ್ರಿಗೇಡ್ ಸಮಾವೇಶ ಏರ್ಪಡಿಸಲಾಗಿದೆ.[ರಾಯಣ್ಣ ಬ್ರಿಗೇಡ್ ನ ಮತ್ತೊಂದು ವಿಕೆಟ್ ಪತನ]
ಈ ಸಮಾವೇಶದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಜನರು ಸೇರಿ ಸರಕಾರಕ್ಕೆ ಎಚ್ಚರಿಕೆಯ ಸಂದೇಶ ಕೊಡಬೇಕು ಎಂದರು. ಸಮಾವೇಶವನ್ನು ನಡೆಸಲು ಎಷ್ಟೇ ವಿರೋಧ ಬಂದರೂ ಯಾರೂ ಹೆದರದೆ ಎಲ್ಲವನ್ನೂ ಎದುರಿಸೋಣ.
ಸಂಘಟನೆ ಕಟ್ಟಿ ದಲಿತರು ಮತ್ತು ಕೆಳ ವರ್ಗದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುವುದು ಮುಖ್ಯ. ಬ್ರಿಗೇಡ್ ಸಂಘಟನೆಯನ್ನು ಯಾರೂ ನಿಲ್ಲಿಸಬೇಡಿ ಹಲವಾರು ಮಠಾಧೀಶರು ಈಗಾಗಲೇ ಬೆಂಬಲ ನೀಡುವುದಾಗಿ ಧೈರ್ಯ ತುಂಬಿ ಆಶೀರ್ವಾದ ಮಾಡಿದ್ದಾರೆ ಎಂದರು.
ನಮ್ಮನ್ನು ಈ ದುಃಸ್ಥಿಗೆ ತಂದವರನ್ನು ನಾವೆಲ್ಲರೂ ಬುದ್ಧಿ ಕಲಿಸಬೇಕಿದೆ ಎಂದು ವಿಧಾನ ಪರಿಷತ್ ಪ್ರತಿ ಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಾವು ಏನು ತಪ್ಪು ಮಾಡಿದ್ದೇವೆ ಎಂದು ನಮಗೆ ಶಿಕ್ಷೆ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರಲು ರಾಯಣ್ಣ ಬ್ರಿಗೇಡ್ ಸಂಘಟಿಸಿಲ್ಲ.
ಬಡವರಿಗೆ ನ್ಯಾಯ ದೊರಕಿಸಿ ಕೊಡಲು ಸಂಘಟಿಸಲಾಗುತ್ತಿದೆ, ನಮಗೂ ಸ್ವಾಭಿಮಾನ ಇದೆ ಎಂದು ಪಕ್ಷದ ಮುಖಂಡರಿಗೆ ತೋರಿಸಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಎಂದರು.