ಪ್ರಮೋದ್ ಮುತಾಲಿಕ್ ಬಂಧಿಸಿ; ಹುಬ್ಬಳ್ಳಿಯಲ್ಲಿ ಪ್ರತಿಭಟನೆ
ಹುಬ್ಬಳ್ಳಿ, ಮೇ,18: ಸಂವಿಧಾನ ರಕ್ಷಣೆಗಾಗಿ ಮತ್ತು ಪ್ರಮೋದ್ ಮುತಾಲಿಕ್ ಬಂಧನಕ್ಕೆ ಒತ್ತಾಯಿಸಿ ಭಾರತ ಮೂಲ ನಿವಾಸಿಗಳ ಒಕ್ಕೂಟ ಮತ್ತು ಸಮತಾ ಸೈನಿಕ ದಳ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದವು.
ಬುಧವಾರ ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸದಸ್ಯರು ರಾಜ್ಯ ಸರ್ಕಾರ ಹಾಗೂ ಪ್ರಮೋದ್ ಮುತಾಲಿಕ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಂವಿಧಾನ ವಿರೋಧಿ ಮುತಾಲಿಕ್ರನ್ನು ದೇಶದ್ರೋಹ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ದಲಿತ ಮುಖಂಡ ಶಂಕರ ಅಜಮನಿ ಮಾತನಾಡಿ, "ರಾಷ್ಟ್ರದಲ್ಲಿ ಸಂವಿಧಾನವನ್ನು ಇಂಚಿಂಚಾಗಿ ತೆರವು ಮಾಡುವ ಕೆಲಸ ನಡೆಯುತ್ತಿದೆ, ಕೆಲವರು ಸಂವಿಧಾನ ಬದಲಿ ಮಾಡಲು ನಾವು ಬಂದಿದ್ದೇವೆ, ಸಂವಿಧಾನ ಬೇಡಾ ಎಂದು ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರವೇ ಬೆಂಬಲ ಕೊಡುತ್ತಿದೆ" ಎಂದು ಆರೋಪಿಸಿದರು.
"ಸಂವಿಧಾನದ ವಿರುದ್ಧ ಮಾತನಾಡುವವರನ್ನು ಸರ್ಕಾರ ಬಂಧಿಸಬೇಕಿತ್ತು. ಅದೇ ಸರ್ಕಾರದ ವಿರುದ್ಧ ಮಾತನಾಡಿದರೇ ಅವರ ವಿರುದ್ಧ ದೇಶದ್ರೋಹದ ಕೇಸುಗಳನ್ನು ಹಾಕಲಾಗುತ್ತಿದೆ. ಪ್ರಮೋದ್ ಮುತಾಲಿಕ್ ಒಂದೇ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಸರ್ಕಾರ ಮಾಡುವ ಕೆಲಸವನ್ನು ಪ್ರಮೋದ್ ಮುತಾಲಿಕ್ ಮಾಡುತ್ತಿದ್ದಾರೆ. ಹಿಂದೂ ಧರ್ಮವನ್ನು ಪ್ರಮೋದ್ ಮುತಾಲಿಕ್ ಗುತ್ತಿಗೆ ಪಡೆದಿದ್ದಾರೆಯೇ?" ಎಂದು ಪ್ರಶ್ನೆ ಮಾಡಿದರು.
ಸಂವಿಧಾನ ವಿರೋಧಿ; ದಲಿತ ಮುಖಂಡ ಶಂಕರ್ ಅಜಮನಿ ಮಾತನಾಡಿ, "ಮುತಾಲಿಕ್ ಮಸೀದಿಗೆ ಮುತ್ತಿಗೆ ಹಾಕುತ್ತೇನೆ ಎನ್ನಲು ಈತ ಯಾರು.?. ಧರ್ಮ ಧರ್ಮದ ವಿರುದ್ಧ ಜಗಳ ಹಚ್ಚುತ್ತಿದ್ದಾರೆ. ರಾಮರಾಜ್ಯ ಅಂದರೆ ಇದೇನಾ?. ಬಡವರ ಮೇಲೆ ಗಲಾಟೆ ಮಾಡುವುದು ರಾಮನ ಸೈನ್ಯ ಕೆಲಸವಾ?" ಎಂದು ಕೇಳಿದರು.
ದೇಗುಲಗಳಲ್ಲಿ ಸುಪ್ರಭಾತ ಹಾಗೂ ಇನ್ನಿತರ ಪ್ರಾರ್ಥನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದ ಪ್ರಮೋದ್ ಮುತಾಲಿಕ್ ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ರಾಷ್ಟ್ರಪತಿಗಳಿಗೆ ಮನವಿ: ಪ್ರಮೋದ್ ಮುತಾಲಿಕ್ರನ್ನು ಕೂಡಲೇ ಬಂಧಿಸಬೇಕು ಮತ್ತೆ ಗಡಿಪಾರು ಮಾಡುವ ಕೆಲಸ ಮಾಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.