ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಸಿದ್ದರಾಮಯ್ಯ ವರ್ತನೆ: ಹಿರೇಮಠ
ಹುಬ್ಬಳ್ಳಿ, ಜುಲೈ 18: ಬೆಂಗಳೂರಿನ ಪರಪ್ಪನ ಅಗ್ರಹಾರದ ಅಕ್ರಮಕ್ಕೆ ಸಂಬಂಧಿಸಿದಂತೆ ಇಬ್ಬರು ಉನ್ನತ ಅಧಿಕಾರಿಗಳ ಬೀದಿ ರಂಪಾಟವನ್ನು ನಿಯಂತ್ರಿಸಲು ವಿಫಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 'ವಿನಾಶಕಾಲೇ ವಿಪರೀತ ಬುದ್ಧಿ' ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಕುಟುಕಿದರು.
ರೂಪಾ ವರ್ಗ : ಟ್ವಿಟ್ಟರಿನಲ್ಲಿ ಸಿದ್ದು ವಿರುದ್ಧ ಭುಗಿಲೆದ್ದ ಆಕ್ರೋಶ
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಅಲ್ಲದೆ ಭ್ರಷ್ಟರ ಬೆನ್ನಿಗೆ ನಿಂತು ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಕಾರಾಗೃಹ ಡಿಜಿಪಿ ಸತ್ಯನಾರಾಯಣರಾವ್ ಅವರ ಕಡ್ಡಾಯ ನಿವೃತ್ತಿಗೆ ಆದೇಶಿಸುವುದನ್ನು ಬಿಟ್ಟು ವರ್ಗಾವಣೆ ಮಾಡಿದ್ದಾರೆ ಎಂದರು.
ಇನ್ನೊಂದೆಡೆ ಭ್ರಷ್ಟಾಚಾರವನ್ನು ಬಯಲಿಗೆ ಎಳೆದಿರುವ ಡಿಐಜಿ ಡಿ.ರೂಪಾ ಅವರನ್ನು ವರ್ಗಾವಣೆ ಮಾಡುವ ಮೂಲಕ ಮಾನಸಿಕ ಸ್ಥೈರ್ಯ ಕುಗ್ಗುವಂತೆ ಮಾಡಿದ್ದು, ಕೂಡಲೇ ಅವರ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕು ಎಂದು ಹಿರೇಮಠ ಆಗ್ರಹಿಸಿದರಲ್ಲದೆ, ಪ್ರಕರಣವನ್ನು ತನಿಖೆ ಮಾಡುತ್ತಿರುವ ಅಧಿಕಾರಿಗಳು ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಗಣಿಗಾರಿಕೆಗೆ ಅವಕಾಶ ನೀಡಿರುವ ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಸ್.ಆರ್.ಹಿರೇಮಠ, ಗಣಿ ಕಂಪನಿಗಳ ಲಾಭದ ಆಸೆಗೆ ಅಮೂಲ್ಯ ನೈಸರ್ಗಿಕ ಸಂಪತ್ತನ್ನು ನಾಶಪಡಿಸಲಾಗುತ್ತಿದೆ. ಸರಕಾರದಿಂದಲೇ ಅಕ್ರಮ ಗಣಿಗಾರಿಕೆಗೆ ಪರವಾನಗಿ ನೀಡಿರುವುದು ಖೇದಕರ ಎಂದು ದೂರಿದರು.
'ಇದೊಂದು ಆಡಳಿತಾತ್ಮಕ ಪ್ರಕ್ರಿಯೆ'- ರೂಪಾ ವರ್ಗಾವಣೆಗೆ ಸಿಎಂ ಪ್ರತಿಕ್ರಿಯೆ
ಗಣಿ ಕಂಪನಿಗಳು ಅರವತ್ತೆರಡು ಎಂಎಂಟಿ ಅದಿರನ್ನು ಹೆಚ್ಚುವರಿಯಾಗಿ ಭೂಮಿಯಿಂದ ಹೊರ ತೆಗೆದಿರುವುದು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಇದೇ ಕಾರಣಕ್ಕೆ ಮೂವತ್ತು ಗಣಿ ಕಂಪನಿಗಳ ಪರವಾನಗಿ ರದ್ದುಗೊಳಿಸಲು ಸಿಇಸಿ ನ್ಯಾಯಾಲಯಕ್ಕೆ ಶಿಫಾರಸು ಮಾಡಿದೆ. ಜುಲೈ ಇಪ್ಪತ್ತರಂದು ಈ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ ಎಂದು ಹಿರೇಮಠ ತಿಳಿಸಿದರು.