ನಾಡೋಜ ಡಾ ಪಾಟೀಲ ಪುಟ್ಟಪ್ಪ ಅನಾರೋಗ್ಯದ ಬಗ್ಗೆ ವದಂತಿ
ಹುಬ್ಬಳ್ಳಿ, ಫೆಬ್ರವರಿ 25: ಅನಾರೋಗ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ಸ್ಥಿರವಾಗಿದೆ. ವಾಟ್ಸಪ್ನಲ್ಲಿ ಅವರು ಇನ್ನಿಲ್ಲ ಎಂಬ ಸಂದೇಶಗಳು ಹರಿದಾಡಿದ್ದವು.
ಮಂಗಳವಾರ ಕಿಮ್ಸ್ ಆಸ್ಪತ್ರೆಗೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರೂ ಭೇಟಿ ನೀಡಿ ಪಾಪು ಅವರ ಆರೋಗ್ಯ ವಿಚಾರಿಸಿದರು. ಸದ್ಯ ಪಾಪು ಅವರು ಗಂಜಿ ಸೇವಿಸುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕಿಮ್ಸ್ ಆಸ್ಪತ್ರೆ ವೈದ್ಯಾಧಿಕಾರಿಗಳು ಹೇಳಿದ್ದಾರೆ.
ನಾಡೋಜ ಡಾ. ಪಾಟೀಲ್ ಪುಟ್ಟಪ್ಪ ಆಸ್ಪತ್ರೆಗೆ ದಾಖಲು
ಅಲ್ಲದೇ ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿರುವ ತಪ್ಪು ಸಂದೇಶಕ್ಕೆ ಯಾರೂ ಕಿವಿಗೊಡಬಾರದು. ಪಾಪು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದೂ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಅವರ ಅಭಿಮಾನಿಗಳ ಬಳಿ ಅವರು ಮಾತನಾಡಿದ್ದಾರೆ. ನಾಡೋಜ ಡಾ ಪಾಟೀಲ ಪುಟ್ಟಪ್ಪ ಅವರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಫೆ 14 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕರ್ನಾಟಕ ಏಕೀಕರಣ ರೂವಾರಿಯಾದ ಪಾಟೀಲ ಪುಟ್ಟಪ್ಪ ಅವರು ಇತ್ತೀಚಿಗಷ್ಟೇ ನೂರು ವರ್ಷಗಳನ್ನು ಪೂರೈಸಿ 101 ನೇ ವರ್ಷಕ್ಕೆ ಕಾಲಿಟ್ಟಾದ್ದಾರೆ. ಇಂದಿಗೂ ಅವರು ಕನ್ನಡ ಹಾಗೂ ಕರ್ನಾಟಕದ ಪರ ಗಟ್ಟಿ ಧ್ವನಿ ಎತ್ತಿ ಕನ್ನಡಿಗರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ.