ಹುಬ್ಬಳ್ಳಿಯ ಆರ್ಎಸ್ಎಸ್ ಕಚೇರಿಗೆ ತೆರಳಿ ರಾಷ್ಟ್ರಧ್ವಜ ಕೊಟ್ಟ ಕಾಂಗ್ರೆಸ್ ಕಾರ್ಯಕರ್ತರು
ಹುಬ್ಬಳ್ಳಿ, ಆಗಸ್ಟ್ 10 : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಆಗುತ್ತಾ ಬಂದಿದೆ. ತಾವು ಬಹಳ ದೇಶ ಭಕ್ತರು ಎಂದು ಹೇಳಿಕೊಳ್ಳುವ ಆರ್ಎಸ್ಎಸ್ ಸಂಘಟನೆ ಮಾತ್ರ ಇಲ್ಲಿಯವರೆಗೂ ತ್ರಿವರ್ಣ ಧ್ವಜವನ್ನು ಒಪ್ಪಿ ಅಪ್ಪಿಕೊಂಡಿರಲಿಲ್ಲ. ಹುಬ್ಬಳ್ಳಿಯಲ್ಲಿ ಆರ್ಎಸ್ಎಸ್ ನಾಯಕರಿಗೆ ಕಾಂಗ್ರೆಸ್ ಕಾರ್ಯಕರ್ತರು ತಿರಂಗಾ ಧ್ವಜವನ್ನು ನೀಡಿದ್ದಾರೆ.
ಆರ್ಎಸ್ಎಸ್ ಸಂಘಟನೆಯ ಕೂಸು ಬಿಜೆಪಿ ಪಕ್ಷ ದೇಶ ಭಕ್ತಿಯಲ್ಲಿ ನಮ್ಮನ್ನು ಮೀರಿಸುವವರು ಯಾರೂ ಇಲ್ಲ ಎಂದು ಹೇಳಿಕೊಂಡು ಬಂದಿದೆ, ಹೇಳಿಕೊಳ್ಳುತ್ತಲೇ ಇದೆ. ಭಾರತ ದೇಶದ ಹಾಗೂ ಹಿಂದೂ ಧರ್ಮದ ಉಳಿವಿಗಾಗಿ ಇರುವುದೇ ಆರ್ಎಸ್ಎಸ್ ಹಾಗೂ ಬಿಜೆಪಿ ಎನ್ನುವ ಹಾಗೆ ನಡೆದುಕೊಳ್ಳಲಾಗುತ್ತಿದೆ. ಆದರೆ, ಇಷ್ಟೆಲ್ಲಾ ದೇಶ ಭಕ್ತಿ ಮೆರೆಯುವ ಆರ್ಎಸ್ಎಸ್ನವರು ಮಾತ್ರ ತ್ರಿವರ್ಣ ಧ್ವಜವನ್ನು ಇಲ್ಲಿಯವರೆಗೆ ಒಪ್ಪಿಕೊಂಡಿರಲಿಲ್ಲ.
ರಾಷ್ಟ್ರಧ್ವಜ ವಿನ್ಯಾಸಕ ಪಿಂಗಾಳಿ ವೆಂಕಯ್ಯ ಬಗ್ಗೆ ಹೆಚ್ಚು ಗೊತ್ತಿಲ್ಲದ ಸಂಗತಿಗಳು
ಈ ಕುರಿತು ದೇಶಾದ್ಯಂತ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಕಿಡಿ ಕಾರಿದ್ದವು. ದೇಶ , ದೇಶ ಭಕ್ತಿ ಎನ್ನುವ ಬಿಜೆಪಿ,ಆರ್ಎಸ್ಎಸ್ ನವರು ತಮ್ಮ ಕಚೇರಿಗಳ ಮೇಲೆ ತ್ರಿವರ್ಣ ಧ್ವಜ ತಿರಂಗಾ ಏಕೆ ಹಾರಿಸುವುದಿಲ್ಲ ಎಂದು ಸವಾಲು ಕೂಡ ಹಾಕಿದ್ದರು. ಇದನ್ನು ಅರಿತ ಹುಬ್ಬಳ್ಳಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಹೆಗ್ಗೇರಿಯಲ್ಲಿರುವ ಆರ್ಎಸ್ಎಸ್ ಕಚೇರಿಗೆ ತೆರಳಿ ಅಲ್ಲಿನ ಮುಖಂಡರ ಮನವೊಲಿಸಿ ತಿರಂಗಾ ಧ್ವಜವನ್ನು ಕಾಣಿಕೆಯಾಗಿ ನೀಡಿದ್ದಾರೆ.
ಹುಬ್ಬಳ್ಳಿಯ ಹೆಗ್ಗೇರಿಯಲ್ಲಿರುವ ಆರ್ಎಸ್ಎಸ್ ಕೇಶವ ಕುಂಜ ಕಚೇರಿಯಲ್ಲಿ ಸಂಘದ ಪ್ರಮುಖರಿಗೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿ ಮಠ ನೇತೃತ್ವದಲ್ಲಿ ಖಾದಿಯಿಂದ ತಯಾರಿಸಿದ ತ್ರಿವರ್ಣ ರಾಷ್ಟ್ರಧ್ವಜ ಹಸ್ತಾಂತರಿಸಲಾಯಿತು. ಈ ವೇಳೆ ಆರ್ಎಸ್ಎಸ್ ಮುಖಂಡ ಅಮರನಾಥ್ ನಾವು ಆಗಸ್ಟ್ 15ರಂದು ಸ್ವಾಂತಂತ್ರ್ಯ ದಿನಾಚರಣೆ ಆಚರಿಸುತ್ತೇವೆ, ಹಿಂದೆಯೂ ಆಚರಿಸಿದ್ದೇವೆ. ನೀವು ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದೀರಾ ಎಂದು ಕಿಡಿಕಾರಿದರು.
ಆದರೂ ಬೆಂಬಿಡದ ಕಾಂಗ್ರೆಸ್ ಕಾರ್ಯಕರ್ತರು ತ್ರಿವರ್ಣ ಧ್ವಜ ಅಮರನಾಥ್ರ ಕೈಗಿಡಿಸುವಲ್ಲಿ ಸಫಲರಾಗಿದ್ದಾರೆ. ಪ್ರಾರಂಭದಲ್ಲಿ ನಮಗೆ ಬೇಡ ನಮ್ಮ ಬಳಿ ರಾಷ್ಟ್ರಧ್ವಜ ಇದೆ ಎಂದು ಸಂಘದ ಪ್ರಮುಖರು ಕೊಳೆಯಾಗಿದ್ದ ರಾಷ್ಟ್ರ ಧ್ವಜವನ್ನು ತಂದು ಕಾಂಗ್ರೆಸ್ಸಿಗರಿಗೆ ತೋರಿಸಿದರು. ಇದಕ್ಕೆ ತಕರಾರು ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಕಲೆ ಬಿದ್ದಿರುವ ಧ್ವಜವನ್ನು ಧ್ವಜಾರೋಹಣ ಮಾಡಬಾರದು ಎಂದು ಹೇಳಿದ್ದಾರೆ. ಆಗ ಆರ್ ಎಸ್ ಎಸ್ ನವರು ನಾವು ಈ ಧ್ವಜವನ್ನು ತೊಳೆದು ಧ್ವಜಾರೋಹಣ ಮಾಡುತ್ತೇವೆ ಎಂದು ಹೇಳಿದ್ದಾರೆ. ಆಗ ಧ್ವಜದ ಮೇಲೆ ಕಲೆ ಬಿದ್ದರೆ ಅದನ್ನು ತೊಳೆಯಬಾರದು ಎಂದು ಧ್ವಜ ನಿಯಮ ಹೇಳುತ್ತದೆ ಎಂದು ಮನವರಿಕೆ ಮಾಡಿದ್ದಾರೆ. ಕೆಲ ಕಾಲದ ವಾಗ್ವಾದದ ನಂತರ ಆರ್ಎಸ್ಎಸ್ ಮುಖಂಡ ಅಮರನಾಥ್ ತ್ರಿವರ್ಣ ರಾಷ್ಟ್ರಧ್ವಜವನ್ನು ಸ್ವೀಕರಿಸಿದ್ದಾರೆ.
Recommended Video